ADVERTISEMENT

ಶಿಕ್ಷಣ ಕ್ಷೇತ್ರ ಉದ್ದಿಮೆ ಸ್ವರೂಪ: ಕೋಲ್ಕಾರ ಕಳವಳ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 5:35 IST
Last Updated 11 ಫೆಬ್ರುವರಿ 2012, 5:35 IST

ಬೆಳಗಾವಿ: ಹಿಂದಿನ ಶಿಕ್ಷಣ ಪದ್ಧತಿ ಸರ್ವಾಂಗೀಣ ಉನ್ನತಿಗೆ ಅಣಿಯಾಗಿದ್ದರೆ, ಇಂದಿನ ಶಿಕ್ಷಣ ಭೌತಿಕ ಪ್ರಗತಿಗೆ ಸೀಮಿತಗೊಂಡಿದೆ. ಶಿಕ್ಷಣ ಕ್ಷೇತ್ರ ಉದ್ದಿಮೆ ಸ್ವರೂಪ ಪಡೆದುಕೊಂಡಿದೆ ಎಂದು ಡಾ.ಎಚ್.ಬಿ.ಕೋಲ್ಕಾರ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಇತ್ತೀಚೆಗೆ ಮಂಜು ಪ್ರಕಾಶನ ಮತ್ತು ನಾಗರಿಕ ಪರಿವರ್ತನಾ ಪ್ರತಿಷ್ಠಾನದವರು ಏರ್ಪಡಿಸಿದ್ದ ಅಧ್ಯಯನ ಹಾಗೂ ಅಧ್ಯಪನ ಚಿಂತನೆ  ಹಾಗೂ ಬಸವರಾಜ ಸುಣಗಾರ ಅವರು ಅಖಿಲ ಕರ್ನಾಟಕ  ಪ್ರಾಥಮಿಕ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ನಿಮಿತ್ತ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಇಂದಿನ ಅಧ್ಯಾಪನ ವೃತ್ತಿ ಹಣ ಸಂಪಾದನೆ ಹಿಂದೆ ಬೆನ್ನು ಬಿದ್ದಿದೆ. ವಿದ್ಯೆ ಪ್ರತಿಯೊಬ್ಬರ ಹಕ್ಕಾದರೆ; ಶಿಕ್ಷಣವು ಮಾರಾಟದ ಸರಕಾಗಿದೆ. ಶಿಕ್ಷಣವು ಜ್ಞಾನದ ಹಸಿವನ್ನು ತುಂಬದೆ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದೆ~ ಎಂದು ಅವರು ಟೀಕಿಸಿದರು.

`ಬೋಧಕನ ಅನುಭವ ಹಾಗೂ ಅಧ್ಯಯನ ವಿಸ್ತಾರದ ಮೇಲೆ ವಿದ್ಯಾರ್ಥಿಗಳ ಬದುಕಿನ ಪ್ರಗತಿ ನಿಂತಿದೆ. ನಿರಂತರ ಓದು, ಅಧ್ಯಯನ ಉತ್ತಮ ಬೋಧನೆಗೆ ಸಹಕಾರಿಯಾಗುತ್ತದೆ~ ಎಂದು ಅವರು ಹೇಳಿದರು.
ದೈಹಿಕ ಶಿಕ್ಷಾಣಾಧಿಕಾರಿ ಎಂ.ಎಚ್. ಚಿಪ್ಪಲಕಟ್ಟಿ ಮಾತನಾಡಿ, ಸಂಘಟನೆಗಳು ವಾಮಮಾರ್ಗ ಹಿಡಿದು ಪ್ರಗತಿಪರ ಕೆಲಸಗಳಿಂದ ವಿಮುಖವಾಗಬಾರದು. ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದರು.

ಡಾ.ಕವಿತಾ ಕುಸಗಲ್ಲ, ಶಿಕ್ಷಕರಲ್ಲಿಯೂ ಕಲಿಕಾ ಪ್ರಕ್ರಿಯೆ ಬದುಕಿನ ಕೊನೆ ಹಂತದವರೆಗೂ  ನಿರಂತರವಾಗಿರಬೇಕು.  ಎಂದು ಹೇಳಿದರು.

ಸಾಹಿತಿ ಶಿ.ಗು.ಕುಸಗಲ್ಲ ಮಾತನಾಡಿ, ಸಮರ್ಥ ಅಧ್ಯಾಪನಕ್ಕೆ ನಿರಂತರ ಅಧ್ಯಯನ ಅವಶ್ಯವಾದದ್ದು. ವಿದ್ಯಾರ್ಥಿ ಸಮೂಹ ನೈತಿಕವಾಗಿ, ಸೃಜನಶೀಲರಾಗಿ ಬೆಳೆಯಲು  ಪಠ್ಯೇತರ ಚಟುವಟಿಕೆಗಳು ಅಧಿಕಗೊಳ್ಳಬೇಕು. ಓದು ಅಂಕ ಗಳಿಸಲಷ್ಟೇ ಅಲ್ಲ, ಜ್ಞಾನ ಪಡೆಯಲು ಎಂಬುದನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಹಿರಿಯ ಸಾಹಿತಿ ಎಂ.ಎ.ಸನದಿ ಹಾಗೂ ಜಲತ್ಕುಮಾರ ಪುಣಜಗೌಡ, ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿ ಪಿ.ಆರ್. ದೊಡ್ಡಕುರುಬರ ಮಾತನಾಡಿದರು. ಸಹನಾ ಕುಲಕರ್ಣಿ ಪ್ರಾರ್ಥಿಸಿ ದರು.  ರವಿ ಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ನಿಂಗರಾಜು ಪರಿಚಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.