ADVERTISEMENT

ಶಿವಸಾಗರ ಸಕ್ಕರೆ ಕಾರ್ಖಾನೆ ಕಾರ್ಯಾರಂಭ 16ರಂದು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 7:55 IST
Last Updated 14 ಅಕ್ಟೋಬರ್ 2011, 7:55 IST

ರಾಮದುರ್ಗ: ತಾಲ್ಲೂಕಿನ ಉದಪುಡಿ ಗ್ರಾಮದಲ್ಲಿರುವ ನೂತನ ಶ್ರೀ ಶಿವಸಾಗರ ಸಕ್ಕರೆ ಕಾರ್ಖಾನೆಯ ಉದ್ಘಾಟನೆ ಮತ್ತು ಪ್ರಥಮ ಕಬ್ಬು ನುರಿಸುವ ಕಾರ್ಯಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭಾನುವಾರ (ಅ.16) ಬೆಳಿಗ್ಗೆ ಚಾಲನೆ ನೀಡಲಿದ್ದಾರೆ.

ಕಾರ್ಯಕ್ರಮದ ಸಾನ್ನಿಧ್ಯವನ್ನು ಕಿಲ್ಲಾ ತೊರಗಲ್‌ನ ಚನ್ನಮಲ್ಲ ಶಿವಾಚಾರ್ಯರು, ಪಂಢರಪುರದ  ಶರದ ಹರಿಭಾವು ಲಾಖೆ ವಹಿಸುವರು. ಕಾರ್ಖಾನೆಯ ಅಧ್ಯಕ್ಷ ರಾಜೇಂದ್ರ ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಸಚಿವರಾದ ಉಮೇಶ ಕತ್ತಿ,   ಎಸ್.ಎ. ರವೀಂದ್ರನಾಥ,  ಮುರಗೇಶ ನಿರಾಣಿ,  ಜಗದೀಶ ಶೆಟ್ಟರ್,  ಸಿ.ಎಂ. ಉದಾಸಿ, ಬಸವರಾಜ ಬೊಮ್ಮಾಯಿ, ಲಕ್ಷ್ಮಣ ಸವದಿ, ಬಾಲಚಂದ್ರ ಜಾರಕಿಹೊಳಿ, ಗೋವಿಂದ ಕಾರಜೋಳ, ಸಿ.ಸಿ. ಪಾಟೀಲ, ಜಿಪಂ ಅಧ್ಯಕ್ಷ ಈರಣ್ಣ ಕಡಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಂಸದರಾದ ಸುರೇಶ ಅಂಗಡಿ, ರಮೆಶ ಕತ್ತಿ, ಪಿ.ಸಿ. ಗದ್ದಿಗೌಡರ, ಪ್ರಭಾಕರ ಕೋರೆ, ಶಾಸಕ ಅಶೋಕ ಪಟ್ಟಣ, ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಉದ್ಯಮಿ ಅಣ್ಣಾಸಾಹೇಬ ಜೊಲ್ಲೆ, ರಾವಸಾಹೇಬ ಪಾಟೀಲ, ಸಂಜಯ ಆವಟೆ, ಕಾಳೆ ಆಬಾ ಅತಿಥಿಗಳಾಗಿ ಆಗಮಿಸಲಿದ್ದಾರೆ.

ತಾಲ್ಲೂಕಿನ ಉದಪುಡಿ ಗ್ರಾಮದ ವ್ಯಾಪ್ತಿಯಲ್ಲಿ ಆರಂಭಗೊಳ್ಳುತ್ತಿರುವ ಕಾರ್ಖಾನೆಯಿಂದ ಈ ಭಾಗದ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಖಾಸಗಿ ಒಡೆತನದಲ್ಲಿ ರೂ. 300 ಕೋಟಿ ವೆಚ್ಚದಲ್ಲಿ ಆರಂಭಗೊಳ್ಳುವ ಕಾರ್ಖಾನೆಯು ಪ್ರತಿನಿತ್ಯ 18 ಮೆ. ವ್ಯಾಟ್ ವಿದ್ಯುತ್ ಉತ್ಪಾದನೆ ಜೊತೆಗೆ 2500 ಕಬ್ಬು ನುರಿಸುವ ಸಾಮರ್ಥ್ಯ ಹೊಂದಿದೆ.

ಕಳೆದ 2010ರಲ್ಲಿ ಬೆಂಗಳೂರಿನಲ್ಲಿ ಜರುಗಿದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಸರ್ಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಪ್ರಥಮ ಕಾರ್ಖಾನೆ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.