ADVERTISEMENT

ಸಂಘಟಿತ ಹೋರಾಟಕ್ಕೆ ಸೋಲಿಲ್ಲ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2012, 6:30 IST
Last Updated 14 ನವೆಂಬರ್ 2012, 6:30 IST

ಬೈಲಹೊಂಗಲ:ಶೋಷಣೆ ವಿರುದ್ಧ ಸಂಘಟಿತರಾಗಿ ಹೋರಾಟ ಮಾಡಿದರೆ ಯಾವ ಸರ್ಕಾರಕ್ಕೂ ಉಳಿಗಾಲವಿಲ್ಲ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮಹಾಮಂಡಳದ ಅಧ್ಯಕ್ಷ ಡಾ.ಕೆ.ಎಸ್. ಶರ್ಮಾ ಹೇಳಿದರು.

ಸಾರಿಗೆ ನೌಕರರು ನಡೆಸಿದ ಐತಿಹಾಸಿಕ ಮುಷ್ಕರದ ಯಶಸ್ವಿ ಹಿನ್ನೆಲೆಯ ಶಿವಬಸವ ಕಲ್ಯಾಣ ಮಂಟಪದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಎಸ್ಮಾ, ವರ್ಗಾವಣೆ, ಪ್ರಕರಣ ದಾಖಲು ಮುಂತಾದ ಬೆದರಿಕೆಗಳಿಗೆ ಅಂಜದೇ, ಐವತ್ತು ವರ್ಷಗಳ ಇತಿಹಾಸದಲ್ಲಿ ಕಾರ್ಮಿಕರೆಲ್ಲರೂ ಸಂಘಟಿತ ಮನೋಭಾವನೆಯಿಂದ ಮಾಡಿದ ಹೋರಾಟಕ್ಕೆ ಐತಿಹಾಸಿಕ ಗೆಲವು ಸಿಗುವ ಮೂಲಕ ಸರ್ಕಾರಕ್ಕೆ ಮಹತ್ವದ ಎಚ್ಚರಿಕೆ ನೀಡಿದೆ ಎಂದ ಅವರು
ಸಾರಿಗೆ ನೌಕರರ ನಲವತ್ತೊಂದು ಬೇಡಿಕೆಗಳನ್ನು ಸರ್ಕಾರದ ಮುಂದಿದ್ದು, ಶೀಘ್ರದಲ್ಲಿ  ಫಲಿತಾಂಶ ಹೊರಬೀಳಲಿದೆ ಎಂದರು. ಹೋರಾಟದ ಯಶಸ್ಸಿನ ಹಿಂದೆ ರಾಜ್ಯದ 1.10 ಸಾವಿರ ಕಾರ್ಮಿಕರ ಶ್ರಮವಿದೆ ಎಂದರು.

ಸಂಘಟನೆಯನ್ನು ಒಡೆಯುವ ಕೆಲಸ ನಡೆಯುತ್ತಲೇ ಇದ್ದು, ಯಾವ ಕಾರಣಕ್ಕೂ ಮಲ್ಲಪ್ಪ ಶೆಟ್ಟರಾಗಬೇಡಿರಿ ಎಂದು ಸಲಹೆ ಮಾಡಿದರು. ಶೋಷಣೆ, ಕಿರುಕುಳ, ಭ್ರಷ್ಟಾಚಾರವನ್ನು ಸಹಿಸುವುದು ಮಹಾಪರಾಧ ಎಂದ ಶರ್ಮಾ ಕಾರ್ಮಿಕರ ವಿರುದ್ಧ ಗೆಲುವು ಸಾಧಿಸಿದ ಸರ್ಕಾರದ ಒಂದು ಉದಾಹರಣೆ ಜಗತ್ತಿನಲ್ಲಿಯೇ ಇಲ್ಲ ಎಂದರು. ಕಾರ್ಮಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಸರ್ಕಾರದ, ಸಂಸ್ಥೆಯ ಜವಾಬ್ದಾರಿಯಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಚಿತ್ರನಟ ಶಿವರಂಜನ ಬೋಳಣ್ಣವರ, ಅಖಿಲ ಕರ್ನಾಟಕ ರಾಜ್ಯ ಸಾರಿಗೆ ನೌಕರ ಮಹಾಮಂಡಳದ ಪ್ರಧಾನ ಕಾರ್ಯದರ್ಶಿ ಬಿ. ದೇವರಾಜ ಅರಸ, ಉಪಾಧ್ಯಕ್ಷ ರಾಘವರಾಜು, ಜಿಲ್ಲಾ ಉಪಾಧ್ಯಕ್ಷ ಎನ್.ಆರ್. ಕಾನಗೋ, ಹಿರಿಯ ವಕೀಲ ಜೆ.ಕೆ. ರೀಝಾ, ವೆಂಕಟೇಶ ದಾಸರ ಆಗಮಿಸಿದ್ದರು.

ಎಸ್.ಜಿ. ಚಿಕ್ಕೂರ, ಅರುಣ ಕುರಿ, ಯು.ಎನ್. ಸಂಕಣ್ಣವರ, ರಾಜು ಪನ್ಯಾಗೋಳ, ರಮೇಶ ಸೂರ್ಯವಂಶಿ, ಜಿ.ಡಿ. ಕಟ್ಟಿಮನಿ, ಸುಭಾಸ ರುದ್ರಾಪೂರ, ಎನ.ಎಂ. ನುಗ್ಗಾನಟ್ಟಿ, ಎಂ.ಎಸ್. ತಲ್ಲೂರ, ಎನ್.ಎಸ್. ಸೊಗಲ ಹಾಗೂ ಕಾರ್ಮಿಕರು ಪಾಲ್ಗೊಂಡಿದ್ದರು.

ಬಿ.ಬಿ. ಸಂಗನಗೌಡರ ಸ್ವಾಗತಿಸಿದರು. ಸುರೇಶ ಯರಡ್ಡಿ ನಿರೂಪಿಸಿದರು. ಐ.ಎಸ್. ಮದವಾಲ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.