ಬೆಳಗಾವಿ: ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನದಲ್ಲಿ ವಿಳಂಬ ಮಾಡಲಾಗುತ್ತಿದೆ ಹಾಗೂ ಅವೈಜ್ಞಾನಿಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದು ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸ್ಮಾರ್ಟ್ ಸಿಟಿ ಕಂಪನಿಯ ಕಚೇರಿಯಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ‘ಯೋಜನೆಯಡಿ ನಗರಕ್ಕೆ ಅನ್ವಯವಾಗುವಂತಹ ಹಾಗೂ ಜನರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ರೂಪಿಸಬೇಕು. ಸಾಧ್ಯವಿದ್ದರೆ ಯೋಜನೆಯ ಸ್ವರೂಪ ಬದಲಿಸಬೇಕು. ನೂರು ಮೀಟರ್ ರಸ್ತೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವುದು ಎಷ್ಟರ ಮಟ್ಟಿಗೆ ಸರಿ?’ ಎಂದು ಕೇಳಿದರು.
‘ವ್ಯಾಕ್ಸಿನ್ ಡಿಪೊದಲ್ಲಿ ಎಕರೆಗಟ್ಟಲೆ ಲಾನ್ ಹಾಕುವ ಯೋಜನೆ ರೂಪಿಸಲಾಗಿದೆ. ಹೋಟೆಲ್ಗಳ ಮುಂದಿನ ಎರಡು ಅಡಿ ಲಾನ್ ನಿರ್ವಹಣೆ ಮಾಡುವುದಕ್ಕೇ ಪರದಾಡುತ್ತಾರೆ. ಹೀಗಿರುವಾಗ, ಎಕರೆಗಟ್ಟಲೆ ಲಾನ್ ಹಾಕಿದರೆ ನಿರ್ವಹಿಸುವುದು ಸಾಧ್ಯವೇ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ನಗರದಾದ್ಯಂತ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
‘ಇನ್ಮುಂದೆ ಯೋಜನೆಯಲ್ಲಿ ವಿಳಂಬವಾಗುವುದನ್ನು ಸಹಿಸುವುದಿಲ್ಲ. ತ್ವರಿತವಾಗಿ ಅನುಷ್ಠಾನಗೊಳಿಸಬೇಕು’ ಎಂದರು. ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ, ನಗರಪಾಲಿಕೆ ಆಯುಕ್ತ ಕೃಷ್ಣೇಗೌಡ ತಾಯಣ್ಣವರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.