ಯಮಕನಮರಡಿ: ಕಳೆದ ಹದಿನೈದು-ಇಪ್ಪತ್ತು ದಿನಗಳಿಂದ ಚಿಕ್ಕಾಲಗುಡ್ಡ, ಹೆಬ್ಬಾಳ, ಹತ್ತರಗಿ, ಉಳ್ಳಾಗಡ್ಡಿ-ಖಾನಾಪೂರ, ಯಮಕನಮರಡಿ, ಹಿಡಕಲ್ ಡ್ಯಾಂ, ಪಾಶ್ಚಾಪೂರ, ಇಸ್ಲಾಂಪೂರ ಶಾಹಬಂದರ್ ಹಾಗೂ ಬೆಳಗಾವಿ ತಾಲ್ಲೂಕಿನ ವಲಯದ ಕೆಲ ಹಳ್ಳಿಗಳು ಸೇರಿದಂತೆ ಮಹಾರಾಷ್ಟ್ರದ ಗಡಿಭಾಗದ ಕೆಲ ಹಳ್ಳಿಗಳಲ್ಲಿ ಹಾರಾಡುತ್ತಿರುವ ಹೆಲಿಕಾಪ್ಟರ್ ಸಾರ್ವಜನಿಕರನ್ನು ಪರದಾಡುವಂತೆ ಮಾಡಿದೆ.
ಕಾರಣ ಈ ಹೆಲಿಕಾಪ್ಟರ್ ಬೃಹತ್, ವರ್ತುಳಾಕಾರದ ಅಂದಾಜು 450 ಕೆ.ಜಿ. ಯಂತ್ರವನ್ನು ಹೊತ್ತು ಗ್ರಾಮೀಣ ವಲಯಗಳಲ್ಲಿ ಸಂಚರಿಸುತ್ತಿರುವುದರಿಂದ ಜನರಿಗೆ ಈ ಹೆಲಿಕಾಪ್ಟರ್ ಹಾರಾಟದ ಹಿಂದನ ಗುಟ್ಟೇನು ಎಂಬುದು ತಿಳಿಯದಾಗಿದೆ.
ಖನಿಜ ವಸ್ತುಗಳ ಹುಡುಕಾಟ: ಬಹುತೇಕ ಜನರ ಅನಿಸಿಕೆ ಪ್ರಕಾರ, ಯುರೇನಿಯಂ, ಮ್ಯಾಂಗನೀಸ್, ಅಲ್ಯೂಮಿನಿಯಂ, ಬಾಕ್ಸೈಟ್ ಕ್ರೊಮಿಯಂ ಮುಂತಾದ ಖನಿಜ ವಸ್ತುಗಳು ಯಾವ ಸ್ಥಳದಲ್ಲಿ ದೊರೆಯುತ್ತವೆ ಎಂಬ ಬಗ್ಗೆ ಹುಡುಕಾಟ ನಡೆದಿದೆ ಎನ್ನಲಾಗಿದೆ.
ಮಕ್ಕಳಲ್ಲಿ ಹರುಷವೋ ಹರುಷ : ಒಂದೆಡೆ ಕೃಷಿಕರು ‘ನಮ್ಮ ಭೂಮಿಗಳಲ್ಲಿ ಖನಿಜ ವಸ್ತುಗಳು ದೊರೆತರೆ ನಮ್ಮ ಭೂಮಿಗಳನ್ನು ಸರ್ಕಾರ ವಶಪಡಿಸಿಕೊಳ್ಳಬಹುದೆ?’ ಎಂದು ದಿಗಿಲುಗೊಂಡಿದ್ದಾರೆ. ಇನ್ನೊಂದೆಡೆ ಚಿಕ್ಕ ಮಕ್ಕಳಿಗೆ ಹಾರಾಡುವ ಹೆಲಿಕಾಪ್ಟರ್ ನಿತ್ಯದ ಮನರಂಜನೆ.
ಹೆಲಿಕಾಪ್ಟರ್ ಹಾರಾಟದ ಹಿಂದಿನ ಮರ್ಮವೇನು ಎಂಬುದು ಸಾರ್ವಜನಿಕರಿಗೆ ಸ್ಪಷ್ಟವಾಗಿ ಗೊತ್ತಿಲ್ಲವಾದರೂ, ರೈತರಿಗಂತೂ ಭೂಮಿ ಕಳೆದುಕೊಳ್ಳುವ ಆತಂಕ ಇದ್ದೇ ಇದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೂ ಹೆಲಿಕಾಪ್ಟರ್ ಹಾರಾಟದ ಮಾಹಿತಿ ಇಲ್ಲ.
ಈ ಹೆಲಿಕಾಪ್ಟರ್ನಲ್ಲಿ ಸಂಚರಿಸುವ ಸಿಬ್ಬಂದಿ ಮಾತ್ರ ದಿನ ನಿತ್ಯ ಉಳ್ಳಾಗಡ್ಡಿ- ಖಾನಾಪುರದ ಸಮೀಪವಿರುವ ಪೂಂಜಲಾಯ್ಡಿ ಕಚೇರಿಯ ಬದಿಯಲ್ಲೇ ತಂಗಿದ್ದು, ನಿತ್ಯ ಈ ಸ್ಥಳದಲ್ಲೇ ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.