ADVERTISEMENT

‘ಕ್ರೈಸ್ತ ಲಾಬಿಗೆ ಮಣಿದ ಸರ್ಕಾರ’

​ಪ್ರಜಾವಾಣಿ ವಾರ್ತೆ
Published 10 ಜನವರಿ 2014, 7:53 IST
Last Updated 10 ಜನವರಿ 2014, 7:53 IST

ಬೆಳಗಾವಿ: ಕಾಂಗ್ರೆಸ್ ನೇತೃತ್ವದ ಸರ್ಕಾರ ಮೌಢ್ಯ ಬಿತ್ತುವ ಬೆನ್ನಿಹಿನ್‌ ಅವರನ್ನು ಬೆಂಗಳೂರಿಗೆ ಮತ್ತೊಮ್ಮೆ ಕರೆತಂದು ಧರ್ಮ ವಿರೋಧಿ ಚಟುವ ಟಿಕೆಗೆ ವೇದಿಕೆ ಒದಗಿಸಿಕೊಡುತ್ತಿದೆ ಎಂದು ಸಂಸದ ಸುರೇಶ ಅಂಗಡಿ ಆರೋಪಿಸಿದ್ದಾರೆ.

ಕೋಮುವಾದ ಹಾಗೂ ಜಾತ್ಯತೀತತೆ ಹೆಸರಿನಲ್ಲಿ 65 ವರ್ಷಗಳಿಂದ ದೇಶದ ಜನರನ್ನು ಪ್ರಚೋದಿಸಿ ಕೊಂಡು ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷ, ಈಗ ಚುನಾವಣೆಗೆ ಮೊದಲು ಮತ್ತೆ ಅಲ್ಪಸಂಖ್ಯಾತರ ಮತಗಳ ಆಸೆಗಾಗಿ ಬೆನ್ನಿಹಿನ್‌ರನ್ನು ಅಹ್ವಾನಿಸುತ್ತಿದೆ. ಇದು ಖಂಡನೀಯ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೇಶದ ಸಂವಿಧಾನದಲ್ಲಿ ಮತಾಂತರಕ್ಕೆ ಅವಕಾ ಶವೇ ಇಲ್ಲ. ಆದರೂ ಭಾರತಕ್ಕೆ ಬಂದು ವಂಚನೆ ನಡೆಸುವ ಬೆನ್ನಿಹಿನ್ ಆಗಮನಕ್ಕೆ ಅನುಮತಿ ಕೊಡುವ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರ ಬಲವಾದ ಕ್ರೈಸ್ತ ಲಾಬಿಗೆ ಮಣಿದಿದೆ. ಪ್ರಜಾಸತ್ತಾತ್ಮಕ ರೀತಿಯಲ್ಲಿ ಆಗಮಿಸಿ ಕಾರ್ಯಕ್ರಮ ನಡೆಸಿದರೆ ಯಾರೂ ವಿರೋಧಿಸಲಾರರು. ಆದರೆ, ನೆಪ ಮಾಡಿ ಬಂದು ಪ್ರಾಚೀನ ಹಿಂದೂ ಧರ್ಮವನ್ನು ದೂರುವ ಬೆನ್ನಿ ಹಿನ್‌ಗೆ ರತ್ನಗಂಬಳಿ ಹಾಕಿ ರಾಜ್ಯಕ್ಕೆ ಅಹ್ವಾನಿ ಸುತ್ತಿರುವುದು ಖಂಡನೀಯ. ಇಂಥಹ ಧರ್ಮ ವಿರೋಧಿ ಚಟುವಟಿಕೆಗೆ ವೇದಿಕೆ ಒದಗಿಸಿಕೊಡುವುದು ಭಾರತದಲ್ಲಿ ಮಾತ್ರ ಸಾಧ್ಯವಾಗುತ್ತಿರುವುದು ವಿಷಾದಕರ ಸಂಗತಿ ಎಂದು ಹೇಳಿದ್ದಾರೆ.

ಬೆನ್ನಿಹಿನ್ ಅವರು ಸ್ಪರ್ಶ ಮಾತ್ರದಿಂದಲೇ ಕಾಯಿಲೆ ಗುಣ ಮಾಡುತ್ತೇನೆ ಎಂದು ಮೌಢ್ಯವನ್ನು ಬಿತ್ತುತ್ತಿದ್ದಾರೆ. ಮೌಢ್ಯತೆ ವಿರುದ್ಧ ಕಾನೂನು ಮಂಡಿಸಲು ಮುಂದಾಗಿದ್ದ ಕಾಂಗ್ರೆಸ್ ಸರ್ಕಾರವೇ ಈಗ ಬೆನ್ನಿಹಿನ್ ಭೇಟಿಗೆ ಅವಕಾಶ ಕೊಡುವುದು ಎಷ್ಟು ಸಮಂಜಸ. ಜಾತಿ, ಜಾತಿಗಳನ್ನು ಒಡೆದು ಆ ಮೂಲಕ ಆಳುವ ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಅಜೆಂಡಾ ಇದೀಗ ಮತ್ತೆ ಅನಾವರಣಗೊಂಡಿದೆ.

ಬಹುಸಂಖ್ಯಾತ ಹಿಂದೂಗಳನ್ನು ಗುರಿಯಾಗಿಸಿಕೊಂಡು ಮೂಢನಂಬಿಕೆ ವಿರೋಧಿ ಕಾನೂನು ಸೇರಿದಂತೆ ಅನೇಕ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಂಡಿರುವ ಕಾಂಗ್ರೆಸ್ ಪಕ್ಷವನ್ನು ಜನತೆ ಲೋಕಸಭಾ ಚುನಾವಣೆಯಲ್ಲಿ ಮನೆಗೆ ಕಳುಹಿಸು ತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭವಿಷ್ಯದ ಲೋಕಸಭಾ ಚುನಾವಣೆ ಎದುರಾಗು ತ್ತಿರುವ ಸಂದರ್ಭದಲ್ಲಿ ಒಂದು ಸಮುದಾಯದ ಮತಬ್ಯಾಂಕ್‌ ಅನ್ನು ಮುಂದಿಟ್ಟುಕೊಂಡು, ಮತಾಂತರ, ಗೋಹತ್ಯೆಗೆ ಪ್ರಚೋದನೆ ನೀಡುವ ಕಾಂಗ್ರೆಸಿನ ಧೋರಣೆ ನಿಜಕ್ಕೂ ಬಹುಸಂಖ್ಯಾತರ ಸ್ವಾಭಿಮಾನವನ್ನು ಪ್ರಶ್ನಿಸುವಂತೆ ಮಾಡಿದೆ. ಇಂಥ ಪ್ರಚೋದನಾತ್ಮಕ ಹಾಗೂ ವಿವಾದಾತ್ಮಕ ನಿರ್ಣಯ ತೆಗೆದುಕೊಳ್ಳುವ ಮೂಲಕ ಕಾಂಗ್ರೆಸ್ ಅವನತಿಯತ್ತ ಸಾಗಿ ತನ್ನ ಗೋರಿಯನ್ನು ತಾನೇ ತೋಡಿಕೊಳ್ಳುತ್ತಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.