ADVERTISEMENT

‘ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಶೀಘ್ರ ಸಾಲಮುಕ್ತ’

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 6:07 IST
Last Updated 24 ಸೆಪ್ಟೆಂಬರ್ 2013, 6:07 IST

ರಾಮದುರ್ಗ: ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆಯು ಈ ವರ್ಷ ಷೇರುದಾರರಿಗೆ ಅರ್ಧ ಬೆಲೆಯಲ್ಲಿ 50 ಕೆ. ಜಿ. ಸಕ್ಕರೆ ನೀಡಿದಂತೆ ಬರುವ ಲಾಭದಲ್ಲಿ ಮುಂದಿನ ವರ್ಷ 100 ಕೆ. ಜಿ. ಸಕ್ಕರೆ ನೀಡಲು ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ ಎಂದು ಅಧ್ಯಕ್ಷ ಮಹಾದೇವಪ್ಪ ಯಾದವಾಡ ಘೋಷಿಸಿದರು.

ಖಾನಪೇಟೆಯ ಕಾರ್ಖಾನೆಯ ಆವರಣದಲ್ಲಿ ಜರುಗಿದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಖಾನೆಯ ಒಟ್ಟು ಷೇರುದಾರರ ಪೈಕಿ 90 ಪ್ರತಿಶತದಷ್ಟು ಸದಸ್ಯರು ಸಕ್ಕರೆ ಪಡೆದುಕೊಂಡು ಹೋಗಿದ್ದಾರೆ. ಇನ್ನುಳಿದ 10ರಷ್ಟು ಸದಸ್ಯರು ಸಕ್ಕರೆ ಪಡೆದುಕೊಳ್ಳಲು ಈ ತಿಂಗಳ 30ರ ತನಕ ಅವಕಾಶವಿದೆ ಎಂದು ತಿಳಿಸಿದರು.

ಅಕ್ಟೋಬರ್‌ ವೇಳೆಗೆ ಕಾರ್ಖಾನೆಯು ಸಾಲಮುಕ್ತ ಕಾರ್ಖಾನೆಯಾಗಿ ಹೊರಹೊಮ್ಮುತ್ತಿದೆ. ಮುಂದಿನ ದಿನಗಳಲ್ಲಿ ಷೇರುದಾರರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಶಿಕ್ಷಣ ಸಂಸ್ಥೆ ಆರಂಭಿಸುವುದು ಮತ್ತು ಷೇರುದಾರರ ಆರೋಗ್ಯ ರಕ್ಷಣೆಗೆ ಕ್ರಮ ಕೈಗೊಳ್ಳುವುದು ಆಡಳಿತ ಮಂಡಳಿಯ ನಿರ್ಧಾರವಾಗಿದೆ ಎಂದು ಹೇಳಿದರು.

ಸರ್ಕಾರದ ಆದೇಶದಂತೆ ಪ್ರತಿ ಕಾರ್ಖಾನೆಯ ಷೇರುದಾರರು ಮುಂದಿನ ಐದು ವರ್ಷಗಳಲ್ಲಿ ಮೂರು ಸಾರಿ ಯಾದರೂ ಕಬ್ಬು ಪೂರೈಕೆ ಮಾಡಬೇಕು. ಮತ್ತು ಕನಿಷ್ಠ ಮೂರು ಸಾಮಾನ್ಯ ಸಭೆಗೆ ಹಾಜರಾಗುವುದು ಕಡ್ಡಾಯ ವಾಗಿದೆ. ತಪ್ಪಿದಲ್ಲಿ ಷೇರುದಾರರು ತಮ್ಮ ಸದಸ್ಯತ್ವವನ್ನು ಕಳೆದುಕೊಳ್ಳುತ್ತಾರೆ ಎಂದು ಎಚ್ಚರಿಸಿದರು.

ರೈತ ಕಬ್ಬು ಕಟಾವು ಸಮಯದಲ್ಲಿ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ. ನಿರ್ದೇಶಕರು ಸೂಚಿಸಿದ ಗದ್ದೆಗಳ ಕಬ್ಬನ್ನು ಮಾತ್ರ ಕಟಾವಿಗೆ ಮುಂದಾಗುತ್ತಾರೆ. ತಾರತಮ್ಯವನ್ನು ಹೋಗಲಾಡಿಸಬೇಕು ಎಂದು ಷೇರುದಾರರ ಕೇಳಿದ ಪ್ರಶ್ನೆಗೆ ಯಾವುದೇ ತಾರತಮ್ಯ ಆಗದಂತೆ ಜಾಗೃತಿ ವಹಿಸುವುದಾಗಿ ಭರವಸೆ ನೀಡಿದರು. 

ಕಾರ್ಖಾನೆಯ ಉಪಾಧ್ಯಕ್ಷ ಜಿ. ಜಿ. ಪಾಟೀಲ ಸ್ವಾಗತಿಸಿದರು. ತೊರಗಲ್‌ ಮಠದ ಚನ್ನಮಲ್ಲ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವದಿಸಿದರು. ಅಧೀಕ್ಷಕ ಶಿವಾನಂದ ಶೆಟ್ಟರ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.