ADVERTISEMENT

‘ಶಾಲೆ ಗಡಿ ಗುರುತು ಮಾಡಿ’

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 5:13 IST
Last Updated 10 ಡಿಸೆಂಬರ್ 2013, 5:13 IST

ಬೆಳಗಾವಿ: ವಡಗಾವಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಬಾಲಕರ ಶಾಲೆ ನಂ. 7ರ ಜಮೀನಿನ ಗಡಿಯನ್ನು ಗುರುತು ಮಾಡಲು ಸಂಬಂದಪಟ್ಟ ಇಲಾಖೆಗೆ ಸೂಚಿಸ ಬೇಕು ಎಂದು ಶಾಲಾಭಿವೃದ್ಧಿ ಮಂಡಳಿ ಸದಸ್ಯರು ಜಿಲ್ಲಾಧಿಕಾರಿಗಳನ್ನು ಒತ್ತಾ ಯಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರವೀಣ ಕುಮಾರ ಅವರಿಗೆ ಸೋಮವಾರ ಮನವಿ ಸಲ್ಲಿಸಿದ ಶಾಲಾಭಿವೃದ್ಧಿ ಮಂಡಳಿ ಅಧ್ಯಕ್ಷ ಅಬಿದ್‌ ಹುಸೇನ ಶೇಖ್‌, ‘ವಡಗಾವಿ ಗ್ರಾಮದ ರಿ.ಸ. ನಂ. 13 ಒಟ್ಟು 1 ಎಕರೆ 15 ಗುಂಟೆ ಜಮೀನಿನ ಪೈಕಿ ವಸತಿಗಾಗಿ ಕಾಯ್ದಿರಿಸಿ 8.66 ಗುಂಟೆ ಕ್ಷೇತ್ರವನ್ನು ಕಟ್ಟಡ ನಿರ್ಮಾಣ ಮಾಡಲು ಶಾಲೆಗೆ ಆಗಸ್ಟ್‌ 23, 2013ರಂದು  ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಮಂಜೂರು ಮಾಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಡಿ. 6ರಂದು ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆಯನ್ನೂ ನೆರವೇರಿಸಿದ್ದರು. ಆದರೆ, ಈಗ ಅಕ್ಕ ಪಕ್ಕದವರು ಈ ಜಾಗ ನಮ್ಮದು ಇದೆ ಎಂದು ತಕರಾರು ತೆಗೆದಿದ್ದಾರೆ. ಹೀಗಾಗಿ ಕಾಮಗಾರಿ ಸ್ಥಗಿತಗೊಂಡಿದೆ’ ಎಂದು ತಿಳಿಸಿದರು.

‘ಈ ಜಾಗದಲ್ಲಿ 26.34 ಗುಂಟೆಯ ಜಮೀನು ರಸ್ತೆಗಾಗಿ ಹಾಗೂ 5.12 ಆಣೆ ಜಮೀನು ರಿಂಗ್‌ ರಸ್ತೆ ಸಲುವಾಗಿ ಬಿಡಲಾಗಿದ್ದು, ಉಳಿದ 8.66 ಗುಂಟೆ ಜಮೀನು ಕಟ್ಟಡದ ಸಲುವಾಗಿ ಮೀಸಲಿಡಲಾಗಿದೆ. ಆದರೆ, ಖಾಸಗಿಯವರು ರಸ್ತೆ ಸಲುವಾಗಿ ಹಾಗೂ ರಿಂಗ್‌ ರಸ್ತೆ ಸಲುವಾಗಿ ಬಿಟ್ಟಿರುವ ಜಮೀನನ್ನು ಅತಿಕ್ರಮಣ ಮಾಡಿ ಕಟ್ಟಡ ಕಟ್ಟುತ್ತಿದ್ದಾರೆ. ಹೀಗಾಗಿ ಕೂಡಲೇ ಭೂಮಾಪಕರಿಂದ ಶಾಲೆಗೆ ಬಿಟ್ಟಿರುವ ಜಾಗವನ್ನು ಗುರುತು ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.