ಬೆಳಗಾವಿ: ಇಲ್ಲಿನ ಯಳ್ಳೂರು ರಸ್ತೆಯಲ್ಲಿರುವ ಕೆಎಲ್ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ಕೋವಿಡ್–19 ಪರಿಸ್ಥಿತಿಯಲ್ಲೂ ಸಾವಿರ ಡಯಾಲಿಸಿಸ್ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.
ಹೋದ ವರ್ಷ ಫೆ.26ರಂದು ರೋಟರಿ–ಕೆಎಲ್ಇ ಡಯಾಲಿಸಿಸ್ ಕೇಂದ್ರ ಪ್ರಾರಂಭಿಸಲಾಗಿತ್ತು. ಶುಕ್ರವಾರ ಸಾವಿರ ಡಯಾಲಿಸಿಸ್ ಚಿಕಿತ್ಸೆ ಪೂರ್ಣಗೊಳಿಸಲಾಯಿತು.
ರೋಟರಿ ಕ್ಲಬ್ ಗವರ್ನರ್ ಸಂಗ್ರಾಮ ಪಾಟೀಲ ಮಾತನಾಡಿ, ‘ಸಾಮಾಜಿಕ ಕಾರ್ಯದಲ್ಲಿ ರೋಟರಿ ಸಂಸ್ಥೆಯು ಮೊದಲಿನಿಂದಲೂ ಮುಂಚೂಣಿಯಲ್ಲಿದೆ. ಕೆಎಲ್ಇಯಂಥ ಆರೋಗ್ಯ ಸೇವಾ ಸಂಸ್ಥೆಗಳೊಂದಿಗೆ ಇನ್ನೂ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆ ಇದೆ’ ಎಂದು ತಿಳಿಸಿದರು.
ಮೂತ್ರಪಿಂಡ ತಜ್ಞ ಡಾ.ವಿಜಯಕುಮಾರ ಪಾಟೀಲ, ‘ಅತ್ಯಾಧುನಿಕ ಉಪಕರಣಗಳ ಜ್ಞಾನ, ಅನುಭವ, ಸಂಶೋಧನೆಗಳು ಹಾಗೂ ನಿರಂತರ ಶಿಕ್ಷಣ ಕಾರ್ಯಕ್ರಮಗಳು ಗುಣಮಟ್ಟದ ಚಿಕಿತ್ಸೆ ನೀಡಲು ಉಪಯುಕ್ತವಾಗಿವೆ. ಕೆಎಲ್ಇ ಸಂಸ್ಥೆಯ ಹಿರಿಯ ವೈದ್ಯರು ಮತ್ತು ನಿರ್ದೇಶಕರ ಪ್ರೋತ್ಸಾಹದಿಂದ ಈ ಸಾಧನೆ ಮಾಡಲಾಗಿದೆ. ಅದರಲ್ಲೂ ಕೋವಿಡ್–19 ಸಂದರ್ಭದಲ್ಲಿ ಸುರಕ್ಷಾ ಕ್ರಮಗಳನ್ನು ಅನುಸರಿಸಿ ಎಲ್ಲರಿಗೂ ಚಿಕಿತ್ಸೆ ನೀಡಿದ ಆಸ್ಪತ್ರೆಯ ವೈದ್ಯರು ಹಾಗೂ ದಾದಿಯರು ಕೊಡುಗೆಯು ಅಪಾರವಾಗಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಆಸ್ಪತ್ರೆಯ ನಿರ್ದೇಶಕ ಡಾ.ಎಸ್.ಸಿ. ಧಾರವಾಡ ಮಾತನಾಡಿ, ‘ಮೂತ್ರಪಿಂಡದ ಕಾಯಿಲೆಗಳಿಂದ ಬಳಲುತ್ತಿರುವ ಸಂಖ್ಯೆಯು ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳು, ಪಕ್ಕದ ಗೋವಾ ಮತ್ತು ಮಹಾರಾಷ್ಟ್ರದಿಂದಲೂ ಇಲ್ಲಿಗೆ ಬಂದು ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ತಿಳಿಸಿದರು.
ರೋಟರಿ ಕ್ಲಬ್ ಅಧ್ಯಕ್ಷ ಡಾ.ಕೆ.ಎಂ. ಕೇಲೂಸ್ಕರ, ಡಾ.ಎಂ.ಎ. ಉಡಚನಕರ, ಕಾರ್ಯದರ್ಶಿ ಗಣೇಶ ದೇಶಪಾಂಡೆ, ಉಪ ಕಾರ್ಯದರ್ಶಿ ಮನೀಶ, ಡಾ.ವೈಶಾಲಿ ಕೇಲೂಸ್ಕರ, ಉತ್ಕರ್ಷಾ ಪಾಟೀಲ, ಮನಿಷಾ ದೇಶಪಾಂಡೆ ಇದ್ದರು.
ಸಂತೋಷ ಇತಾಪೆ ನಿರೂಪಿಸಿದರು. ಡಾ.ಬಿ.ಎಸ್. ಮಹಾಂತಶೆಟ್ಟಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.