ಬೆಳಗಾವಿ: ತಾಲ್ಲೂಕಿನ ಶಿವಾಪೂರ ಮತ್ತು ಸುತಗಟ್ಟಿ ಗ್ರಾಮದ ಮಧ್ಯದ ರಸ್ತೆಯಲ್ಲಿ ಮಂಗಳವಾರ ಅಪಘಾತಕ್ಕೀಡಾದ ಸರಕು ಸಾಗಣೆ ವಾಹನದಿಂದ ಕೇವಲ ಒಂದು ತಾಸಿನಲ್ಲಿ 190 ಸಕ್ಕರೆ ಚೀಲಗಳನ್ನು (50 ಕೆ.ಜಿ.ಯವು) ಕಳವು ಮಾಡಲಾಗಿದೆ.
ನೆರೆಯ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಯಿಂದ 300 ಸಕ್ಕರೆ ಚೀಲಗಳನ್ನು ಸಾಗಿಸಲಾಗುತ್ತಿತ್ತು. ವಾಹನ ಪಲ್ಟಿಯಾದ್ದರಿಂದ ಚಾಲಕ ಗಂಭೀರವಾಗಿ ಗಾಯಗೊಂಡಿದ್ದ. ಅವರನ್ನು ಇನ್ನೊಬ್ಬ ಚಾಲಕ ಮತ್ತು ಕ್ಲೀನರ್ ಆಸ್ಪತ್ರೆಗೆ ದಾಖಲಿಸಿ ಬರುವ ವೇಳೆಗಾಗಲೇ ಕಳವು ನಡೆದಿದೆ ಎಂದು ದೂರು ನೀಡಲಾಗಿದೆ. ಸಮೀಪದ ಗ್ರಾಮದವರು ಹಾಗೂ ದಾರಿಯಲ್ಲಿ ಹೋಗುತ್ತಿದ್ದವರು ಸಕ್ಕರೆ ಚೀಲಗಳನ್ನು ಕಳವು ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ಕಾಕತಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಶ್ರೀಶೈಲ ಕೌಜಲಗಿ, ಪಿಎಸ್ಐ ಅವಿನಾಶ ಯರಗೊಪ್ಪ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.