ಬೆಳಗಾವಿ: ‘ಸಮಾಜದ ಸ್ವಾಸ್ಥ್ಯ ಕಾಪಾಡಲು ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ಮಂಗಳವಾರ ಬೆಳಿಗ್ಗೆ ಪಿಎಫ್ಐ ಹಾಗೂ ಎಸ್ಡಿಪಿಐ ಸೇರಿ ಏಳು ಮುಖಂಡರನ್ನು ಬಂಧಿಸಲಾಗಿದೆ’ ಎಂದು ಮಾರ್ಕೆಟ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ಆಜಂ ನಗರದ ನಿವಾಸಿ ಪಿಎಫ್ಐ ಸಂಘಟನೆಯ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಝಕೀವುಲ್ಲಾ ಫೈಜಿ, ಅಸಾದ್ಖಾನ್ ಬಡಾವಣೆ ನಿವಾಸಿ ಎಸ್ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಅಬೀದ್ ಖಾನ್ ಕಡೋಲಿ, ಬದ್ರುದ್ದೀನ್ ಪಟೇಲ್, ಶಿವಾಜಿ ನಗರ ನಿವಾಸಿ ಸಲಾವುದ್ದೀನ್ ಖಿಲೆವಾಲೆ, ಅಮನ್ ನಗರ ನಿವಾಸಿ ಸಮೀವುಲ್ಲಾ ಪೀರ್ಜಾದೆ, ಬಾಕ್ಸೈಟ್ ರೋಡ್ ಪ್ರದೇಶದ ನಿವಾಸಿ ಜಹೀರ್ ಘೀವಾಲೆ, ವಿದ್ಯಾಗಿರಿ ನಿವಾಸಿ ರೆಹಾನ್ ಅಜೀಜ್(25) ಬಂಧಿತರು.
ಎಲ್ಲರನ್ನೂ ಸಿಆರ್ಪಿಸಿ 110 ಸೆಕ್ಷನ್ ಅಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಮಂಗಳವಾ ನಸುಕಿನ ಜಾವ 4 ಗಂಟೆಗೆ ಡಿಸಿಸಿ ರವೀಂದ್ರ ಗಡಾದಿ ನೇತೃತ್ವದಲ್ಲಿ ದಾಳಿ ಮಾಡಿ, ವಶಕ್ಕೆ ಪಡೆಯಲಾಗಿತ್ತು. ಬಂಧಿತರನ್ನು ಮಂಗಳವಾರ ಬೆಳಿಗ್ಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸಲಾಗಿದೆ.
ವೈದ್ಯಕೀಯ ತಪಾಸಣೆ ಬಳಿಕ ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
--
ದೇಶದಲ್ಲಿ ಮುಸ್ಲಿಂ, ದಲಿತರನ್ನು ಅಪರಾಧಿಗಳಂತೆ ಬಿಂಬಿಸುತ್ತಿದ್ದಾರೆ
ಬೆಳಗಾವಿ: ನಗರದಲ್ಲಿ ಮಂಗಳವಾರ ಬೆಳಿಗ್ಗೆ ಬಂಧಿಸಲಾದ ಪಿಎಫ್ಐ, ಎಸ್ಡಿಪಿಐ ಸಂಘಟನೆಗಳ ಏಳು ಯುವಕರನ್ನು ಬಿಗಿ ಭದ್ರತೆಯಲ್ಲಿ ಇಲ್ಲಿನ ಹಿಂಡಲಗಾ ಜೈಲಿಗೆ ಕಳುಹಿಸಲಾಯಿತು.
ಜೈಲು ಬಾಗಿಲು ಸಮೀಪಿಸುತ್ತಿದ್ದಂತೆಯೇ ಎಸ್ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಅಬೀದ್ಖಾನ್ ಕಡೋಲಿ ‘ಮುಸ್ಲಿಂ ಆ್ಯಂಡ್ ದಲಿತ್ ಕ್ರೈಂ– ಇಂಡಿಯಾ ಪ್ರಸೆಂಟ್ (ದೇಶದಲ್ಲಿ ಮುಸ್ಲಿಮರು, ದಲಿತರನ್ನು ಕ್ರಿಮಿನಲ್ಗಳಂತೆ ಬಿಂಬಿಸಲಾಗುತ್ತಿದೆ)’ ಎಂದು ಘೋಷಣೆ ಹಾಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.