ಬೆಳಗಾವಿ: ನೆಲದಲ್ಲಿ ಓಡುವ ಹುಂಜ... ಗೋಡೆ ಏರುವ ಹಲ್ಲಿ.... ಮರ ಏರುವ ಓತಿಕ್ಯಾತ್... ಕಟ್ಟಡದಿಂದ ಕಟ್ಟಡಕ್ಕೆ ನೆಗೆಯುವ ಸ್ಪೈಡರ್ ಮ್ಯಾನ್... ಎಲ್ಲವೂ ಒಟ್ಟಾಗಿ ಬೆಳಗಾವಿಯ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಿವೆ.
ಇಲ್ಲಿನ ಸಾವಗಾಂವ್ ಬಳಿಯಿರುವ ಅಂಗಡಿ ಎಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ಶನಿವಾರ ಆರಂಭವಾದ ಎರಡು ದಿನಗಳ 8ನೇ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಕಂಡುಬಂದ ದೃಶ್ಯಗಳಿವು. ಹತ್ತು ಹಲವು ಆಕಾರಗಳ ನೂರಕ್ಕೂ ಹೆಚ್ಚು ಗಾಳಿಪಟಗಳು ಹಾರಾಟ ನಡೆಸಿದವು. ನೆರೆದಿದ್ದ ಜನರನ್ನು ಆಕರ್ಷಿಸಿದವು.
ಬಿಜೆಪಿ ಮುಖಂಡ ಅಭಯ ಪಾಟೀಲ ನೇತೃತ್ವದ ಪರಿವರ್ತನಾ ಪರಿವಾರವು ಉತ್ಸವವನ್ನು ಆಯೋಜಿಸಿದೆ. ಕಳೆದ 8 ವರ್ಷಗಳಿಂದ ಆಯೋಜಿಸಿಕೊಂಡು ಬರುತ್ತಿದೆ. ದೇಶಿಯರಲ್ಲದೇ, ಅಂತರರಾಷ್ಟ್ರೀಯ ಗಾಳಿಪಟಗಳ ಪಟುಗಳು ಭಾಗವಹಿಸಿದ್ದರು.
ಉದ್ಯಮಿ ಕೆ.ಟಿ. ಕಾಟ್ವಾ, ದಿಲೀಪ್ ಚಿಟ್ನೀಸ್, ಮಾರುತಿ ಕೊನೊ, ವಿನಾಯಕ ಕಡೋಲ್ಕರ್ ಹಾಗೂ ಭರತ್ ದೇಶಪಾಂಡೆ ಅವರು ಉತ್ಸವಕ್ಕೆ ಚಾಲನೆ ನೀಡಿದರು.
ಕುಲಭೂಷಣ ಬಿಡುಗಡೆಗೆ ಒತ್ತಾಯ: ಪಾಕಿಸ್ತಾನ ಬಂಧಿಸಿರುವ ಭಾರತದ ಕುಲಭೂಷಣ ಜಾಧವ್ ಅವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಮೈಸೂರಿನ ವಿ.ಕೆ. ರಾವ್ ಅವರು ಕುಲಭೂಷಣ ಅವರ ಭಾವಚಿತ್ರ ಹೊಂದಿದ ಗಾಳಿಪಟವನ್ನು ಹಾರಿಸಿದರು. ಡ್ರಾಗನ್, ಕಾರ್ಟೂನ್ ಪಾತ್ರಗಳು, ಸೂಪರ್ಮ್ಯಾನ್ ಸೇರಿ ಹಲವು ಆಕರ್ಷಕ ಗಾಳಿಪಟಗಳು ಬಾನಿನಲ್ಲಿ ಹಾರಾಡಿದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.