ಚಿಕ್ಕೋಡಿ: ಅಧಿಕಾರ ವಿಕೇಂದ್ರಿಕರಣದ ದೃಷ್ಟಿಯಿಂದ ರಾಜ್ಯದಲ್ಲಿಯೇ ಅತೀ ವಿಸ್ತಾರವಾಗಿರುವ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ರಚಿಸಬೇಕು ಎಂದು ಒತ್ತಾಯಿಸಿ ಪಟ್ಟಣದ ಮಿನಿ ವಿಧಾನಸೌಧದ ಎದುರು ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ದಿಷ್ಠಾವಧಿ ಧರಣಿ ಸತ್ಯಾಗ್ರಹ ಭಾನುವಾರ ಏಳನೇ ದಿನಕ್ಕೆ ಕಾಲಿಟ್ಟಿದೆ.
ಗ್ರಾಮೀಣ ಪ್ರದೇಶದ ವಿವಿಧ ಸಂಘ–ಸಂಸ್ಥೆ, ಸಂಘಟನೆಗಳ ಪದಾಧಿಕಾರಿಗಳು, ರಾಜಕೀಯ ಮುಖಂಡರು ಧರಣಿಯಲ್ಲಿ ಪಾಲ್ಗೊಂಡು ಚಿಕ್ಕೋಡಿ ಜಿಲ್ಲೆ ರಚನೆಗೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದು, ಭಾನುವಾರ ನಿಪ್ಪಾಣಿಯ ಕನ್ನಡ ಬಳಗ, ಕನ್ನಡ ಸಾಹಿತ್ಯ ಪರಿಷತ್ ಘಟಕ, ವಿಜಯನಗರದ ಲಕ್ಷ್ಮೀದೇವಿ ಮಹಿಳಾ ಮಂಡಳ, ಮುಗಳಿಯ ಲಕ್ಷ್ಮೀದೇವಿ ಭಜನಾ ಮಂಡಳಗಳ ಕಾರ್ಯಕರ್ತರು ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.
ಹೋರಾಟದ ಮುಖಂಡ ಬಿ.ಆರ್.ಸಂಗಪ್ಪಗೋಳ, ರೈತ ಮುಖಂಡ ತ್ಯಾಗರಾಜ್ ಕದಂ, ಸಾಹಿತಿ ಪ್ರೊ.ಶಿವಲಿಂಗ ಹಂಜಿ, ಹಜರತ್ಅಲಿ ದೇಗಿನಾಳ, ಮಹಾದೇವ ಬರಗಾಲೆ, ಕಾಡಗೌಡ ಪಾಟೀಲ,ಎಸ್.ಕೆ.ಖಜ್ಜನ್ನವರ, ಪ್ರೊ.ಕೊಣ್ಣೂರಿ, ಭರತ ಕಲಾಚಂದ್ರ, ಸುರೇಶ ಬ್ಯಾಕುಡೆ ಧರಣಿಯಲ್ಲಿದ್ದರು.
ಮಾಜಿ ಸಚಿವ ಶಶಿಕಾಂತ ನಾಯಿಕ ಶಾಸಕರಾದ ಮೋಹನ ಶಹಾ, ಕಲ್ಲಪ್ಪಣ್ಣ ಮಗೆನ್ನವರ ಶನಿವಾರ ಪ್ರತಿಭಟನಾ ಸ್ಥಳಕ್ಕೆ ಭೆಟಿ ನೀಡಿ ಬೆಂಬಲಿಸಿದ್ದರು. ‘ಚಿಕ್ಕೋಡಿ ಜಿಲ್ಲೆ ರಚನೆಗೆ ಅಥಣಿ ತಾಲ್ಲೂಕಿನ ಸಮಸ್ತ ಜನರ ಬೆಂಬಲವಿದೆ’ ಎಂದು ಮೋಹನ ಶಹಾ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.