ADVERTISEMENT

ಮಾರಾಮಾರಿ: ಆರು ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 11 ಮೇ 2019, 15:26 IST
Last Updated 11 ಮೇ 2019, 15:26 IST
ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ
ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ   

ಬೆಳಗಾವಿ: ಇಲ್ಲಿನ ಗ್ಯಾಂಗ್‌ವಾಡಿಯಲ್ಲಿ ಎರಡು ಗುಂಪುಗಳ ನಡುವೆ ಶುಕ್ರವಾರ ನಡೆದ ಮಾರಾಮಾರಿಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಒಬ್ಬರನ್ನು ಬಂಧಿಸಲಾಗಿದೆ. ಗ್ಯಾಂಗ್‌ವಾಡಿ ನಿವಾಸಿ ಕಿರಣ ಚೌಗುಲೆ ಬಂಧಿತ. ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಉಳಿದವರ ಪತ್ತೆಗಾಗಿ ಪೊಲೀಸರ ತಂಡ ಶನಿವಾರ ಮಹಾರಾಷ್ಟ್ರಕ್ಕೆ ತೆರಳಿದೆ ಎಂದು ಮೂಲಗಳು ತಿಳಿಸಿವೆ.

ರಾಹುಲ್ ಚೌಗುಲೆ (22), ಮೀನಾಕ್ಷಿ ಚೌಗುಲೆ (40), ವಿದುರ ಚೌಗುಲೆ (27), ಪ್ರಿತಮ್ ಲೋಂಡೆ (35), ಬಿನಾಬಾಯಿ ಚೌಗುಲೆ (55), ಅಜಯ ಲೋಂಡೆ (25) ಗಾಯಗೊಂಡಿದ್ದಾರೆ. ಲೋಂಡೆ ಹಾಗೂ ಚೌಗುಲೆ ಕುಟುಂಬಗಳ ನಡುವಿನ ಹಳೆಯ ವೈಮನಸ್ಸಿನಿಂದ ಜಗಳ ನಡೆದಿದೆ. ಎರಡೂ ಗುಂಪಿನವರು ತಲವಾರ್ ಹಾಗೂ ಕಟ್ಟಿಗೆಗಳಿಂದ ಒಡೆದಾಡಿಕೊಂಡಿದ್ದಾರೆ. ಈ ವೇಳೆ ನಡೆದ ಕಲ್ಲು ತೂರಾಟದಿಂದ ಎರಡು ಆಟೊರಿಕ್ಷಾ, ದ್ವಿಚಕ್ರವಾಹನ, ಕಾರು ಹಾಗೂ ಎರಡು ಮನೆಗಳ ಕಿಟಕಿ ಗಾಜುಗಳು ಜಖಂಗೊಂಡಿವೆ. ಘಟನೆಯಿಂದಾಗಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿತ್ತು ಎಂದು ತಿಳಿದುಬಂದಿದೆ. ಈ ಕುರಿತು ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಹಿಂಡಾಲ್ಕೋ ಕ್ರಾಸ್ ಬಳಿ ವಿದುರ ಚೌಗುಲೆಯನ್ನು ಹಿಡಿದ ಇನ್ನೊಂದು ಗುಂಪು ಅವರ ತಲೆ ಹಾಗೂ ಕೈ-ಕಾಲಿಗೆ ಒಡೆದು ಗಾಯಗೊಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು 15 ಮಂದಿ ವಿರುದ್ಧ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.