ADVERTISEMENT

ಬೆಳಗಾವಿ‌: ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾರು, ಚಾಲಕನಿಗೆ ಧರ್ಮದೇಟು

ಮಹಿಳೆ ಸ್ಥಳದಲ್ಲೇ ಸಾವು

​ಪ್ರಜಾವಾಣಿ ವಾರ್ತೆ
Published 8 ಜುಲೈ 2022, 5:36 IST
Last Updated 8 ಜುಲೈ 2022, 5:36 IST
ಅಪಘಾತದಲ್ಲಿ ನುಜ್ಜುಗುಜ್ಜಾದ ಕಾರು
ಅಪಘಾತದಲ್ಲಿ ನುಜ್ಜುಗುಜ್ಜಾದ ಕಾರು   

ಬೆಳಗಾವಿ‌: ಇಲ್ಲಿನ ಬಸವೇಶ್ವರ ವೃತ್ತದ ಬಳಿ ಎಲ್ಐಸಿ ಕಚೇರಿಯ ಆವರಣದಲ್ಲಿ ಶುಕ್ರವಾರ ಬೆಳಿಗ್ಗೆ ಕಸಗುಡಿಸುತ್ತಿದ್ದ ಮಹಿಳೆಯ ಮೇಲೆ ಕಾರುಹರಿದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಟಿಳಕವಾಡಿಯ ಪಿ.ಕೆ.ಕ್ವಾಟರ್ಸ್ ನಿವಾಸಿಅನಿತಾ ರಾಜೇಶ ಬನ್ಸ್ (52) ಮೃತಪಟ್ಟವರು.

ಅನಿತಾ ಅವರು ಎಂದಿನಂತೆ ಎಲ್ಐಸಿ ಕಚೇರಿ ಆವರಣವನ್ನು ಶುಚಿಗೊಳಿಸುವ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಗುರುರಾಜ ಕುಲಕರ್ಣಿ ಎನ್ನುವವರು ಎಲ್ಐಸಿ ಆವರಣದಿಂದಲೇ ಕಾರು ಹೊರತಗೆಯುವಾಗ ಅನಿತಾ ಅವರಿಗೆ ಡಿಕ್ಕಿ ಹೊಡೆಸಿದರು.

ADVERTISEMENT

ಕಾರು ಎಷ್ಟು ವೇಗವಾಗಿ ಬಂದು ಗುದ್ದಿದೆಯೆಂದರೆ; ಅದರ ರಭಸಕ್ಕೆ ಅನಿತಾ ಸ್ಥಳದಲ್ಲಿಯೇ ಮೃತಪಟ್ಟರು. ಕಾರಿನ ಎಡಭಾಗ ಕೂಡ ನಜ್ಜುಗುಜ್ಜಾಯಿತು.

ಸ್ಥಳದಲ್ಲಿ ಸೇರಿದ ಅಪಾರ ಜನ ಕಾರು ಚಾಲಕ ಗುರುರಾಜ ಅವರನ್ನು ಹಿಗ್ಗಾಮುಗ್ಗಾ ಥಳಿಸಿದರು.ಟಿಳಕವಾಡಿ ಠಾಣೆ ಪೊಲೀಸರು ಅವರನ್ನು ರಕ್ಷಿಸಿ ಠಾಣೆಗೆ ಕರೆದೊಯ್ದರು.

ಮಹಿಳೆ ಶವವನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಅನಿತಾ ಅವರ ಮಕ್ಕಳು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು.

ವಾಹನ ಡಿಕ್ಕಿ: ಪಾದಚಾರಿ ಕಾಲು ತುಂಡು
ಬೆಳಗಾವಿ: ತಾಲ್ಲೂಕಿನ ಬಾಳೇಕುಂದ್ರಿ- ಹೊನ್ನಿಹಾಳ ಗ್ರಾಮಗಳ ಮಧ್ಯೆ ಶುಕ್ರವಾರ ಬೆಳಿಗ್ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪಾದಚಾರಿ ವ್ಯಕ್ತಿಯ ಕಾಲುಗಳು ತುಂಡಾಗಿವೆ.

ರಸ್ತೆ ಪಕ್ಕದಲ್ಲಿ ನಡೆದುಹೊರಟಿದ್ದ ಮಾವಿನಕಟ್ಟಿ ನಿವಾಸಿ ಮಹಾಂತೇಶ ಸನದಿ (35) ಅಪಘಾತದಿಂದ ಕಾಲು ಕಳೆದುಕೊಂಡವರು.

ಅಪಘಾತಪಡಿಸಿದ ಸವಾರ ವಾಹನ ಸಮೇತ ಪರಾರಿಯಾಗಿದ್ದಾನೆ.

ರಸ್ತೆ ಮೇಲೆ ರಕ್ತದ ಮಡುವಿನಲ್ಲಿ ಬಿದ್ದ ಮಹಾಂತೇಶ ಅವರ ನೆರವಿಗೆ ಧಾವಿಸಿದ ಜನ ನೀರು ಕುಡಿಸಿ, ಸಂತೈಸಿದರು. ಆಂಬುಲೆನ್ಸ್ ಕರೆಯಿಸಿ ಆಸ್ಪತ್ರೆಗೆ ಸಾಗಿಸಿದರು.

ಮಾರಿಹಾಳ ಪೊಲೀಸರು ಸ್ಥಳ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.