ಬೈಲಹೊಂಗಲ: ಭಾರತೀಯ ಸೇನೆಯಲ್ಲಿ ವಿವಿಧ ಪ್ರದೇಶಗಳಲ್ಲಿ 30 ವರ್ಷ ಸೇವೆ ಸಲ್ಲಿಸಿ ಸೇವಾ ನಿವೃತ್ತಿಗೊಂಡು ತಾಯಿ ನಾಡಿಗೆ ಆಗಮಿಸಿದ ನಿವೃತ್ತ ಸುಬೇದಾರ ಯೋಧ ರಾಜಕುಮಾರ ಈರಪ್ಪ ಸವಟಗಿ ಅವರನ್ನು ಕುಟುಂಬಸ್ಥರು ಹಾಗೂ ಮಾಜಿ ಸೈನಿಕರು ಮಂಗಳವಾರ ಅದ್ಧೂರಿಯಾಗಿ ಸ್ವಾಗತಿಸಿದರು.
ಪಟ್ಟಣದ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತಕ್ಕೆ ಬಂದ ಯೋಧ, ಚನ್ನಮ್ಮನ ಅಶ್ವಾರೂಢ ಪ್ರತಿಮೆಗೆ ಹೂವಿನ ಮಾಲೆ ಹಾಕಿ ಗೌರವ ಸಲ್ಲಿಸಿದರು. ಎಪಿಎಂಸಿ ಗಣೇಶ ದೇವಸ್ಥಾನ, ಇಂಚಲ ಕ್ರಾಸ್, ಬಸ್ ನಿಲ್ದಾಣ, ರಾಯಣ್ಣ ವೃತ್ತದವರೆಗೆ ತೆರೆದ ವಾಹನದಲ್ಲಿ ಯೋಧನನ್ನು ಮೆರವಣಿಗೆ ಮಾಡಲಾಯಿತು. ಮಾಜಿ ಸೈನಿಕರು, ಯೋಧನ ಕುಟುಂಬಸ್ಥರು ಬೈಕ್ ರ್ಯಾಲಿ ನಡೆಸಿ ಯೋಧನಿಗೆ ಗೌರವ ಸೂಚಿಸಿದರು.
ನಿವೃತ್ತ ಯೋಧ ರಾಜಕುಮಾರ ಸವಟಗಿ ಮಾತನಾಡಿ, ‘ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಗುವುದು ಅದೃಷ್ಟ. ಆ ಅವಕಾಶ ನನಗೆ ಸಿಕ್ಕು ಯಶಸ್ವಿಯಾಗಿ ಪೂರ್ಣಗೊಳಿಸಿರುವೆ. ಯುವಕರು ಚೆನ್ನಾಗಿ ಓದಿ ದುಶ್ಟಟಗಳಿಗೆ ಬಲಿಯಾಗದೆ ದೇಶ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಪಾಲಕರು ಮಕ್ಕಳನ್ನು ಹೆಚ್ಚೆಚ್ಚು ಭಾರತೀಯ ಸೇನೆಗೆ ಕೊಡುಗೆಯಾಗಿ ನೀಡಬೇಕು’ ಎಂದರು.
ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಿ.ಬಿ.ಬೋಗೂರ, ಉಪಾಧ್ಯಕ್ಷ ಚಂದ್ರಶೇಖರ ನೇಸರಗಿ, ವಿರುಪಾಕ್ಷ ಹರ್ಲಾಪೂರ, ಮುರುಗಯ್ಯ ಮಠಪತಿ, ಮುರುಗೆಪ್ಪ ಬೆಂಡಿಗೇರಿ, ಯೋಧನ ಪತ್ನಿ ಅನಸೂಯಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.