ಗೋಕಾಕ: ‘ತಾಲ್ಲೂಕಿನ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡುತ್ತಿದ್ದು, ಇಡೀ ರಾಜ್ಯದ ಜನತೆ ಗೋಕಾವಿ ನಾಡಿನತ್ತ ತಲೆ ಎತ್ತಿ ನೋಡುವಂತಾಗಿದೆ’ ಎಂದು ಇಲ್ಲಿನ ಬಿಇಒ ಜಿ.ಬಿ. ಬಳಗಾರ ಹೇಳಿದರು.
ಇಲ್ಲಿನ ಲಕ್ಷ್ಮೀದೇವಿ ದೇವಸ್ಥಾನ ಆವರಣದಲ್ಲಿ ಗುರುವಾರ ಪೇಟೆಯ ನಾಗರಿಕರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ,ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದ ಶೂನ್ಯ ಸಂಪಾದನ ಮಠದ ಸಿದ್ಧಲಿಂಗೇಶ್ವರ ಬಿಸಿಎ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿ ವೈಷ್ಣವಿ ತಳ್ಳಿ ಅವರನ್ನು ಸತ್ಕರಿಸಿ ಅವರು ಮಾತನಾಡಿದರು.
‘ಶಾಸಕ ರಮೇಶ ಜಾರಕಿಹೊಳಿ ಅವರು ಕ್ಷೇತ್ರದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದಾರೆ. ಇವುಗಳನ್ನು ಮಕ್ಕಳು ಸದ್ಬಳಕೆ ಮಾಡಿಕೊಂಡು ಉತ್ತಮ ಬದುಕು ರೂಪಿಸಿಕೊಳ್ಳಬೇಕು’ ಎಂದು ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ, ‘ಉತ್ತಮ ಜೀವನಕ್ಕೆ ವಿದ್ಯೆ ಅತ್ಯವಶ್ಯವಾಗಿದೆ. ಪಾಲಕರು ಶಿಕ್ಷಣಕ್ಕೆ ಮಹತ್ವ ಕೊಡಬೇಕು’ ಎಂದು ಸಲಹೆ ನೀಡಿದರು.
ಗುರುವಾರ ಪೇಟೆಯ ನಾಗರಿಕರು, ಸಂಗೊಳ್ಳಿ ರಾಯಣ್ಣ ಸಂಘ, ಕುಂಬಾರ ಸಮಾಜ, ಚಿತ್ರಗಾರ ಸಮಾಜ ಹಾಗೂ ಬಸಳಗುಂದಿ ಗ್ರಾಮಸ್ಥರು ವಿದ್ಯಾರ್ಥಿನಿಯನ್ನು ಸತ್ಕರಿಸಿದರು.
ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ, ನಗರಸಭಾಧ್ಯಕ್ಷ ಜಯಾನಂದ ಹುಣಚ್ಯಾಳಿ, ಮೂಡಲಗಿ ಬಿಇಒ ಅಜಿತ ಮನ್ನಿಕೇರಿ, ನಗರಸಭೆ ಪ್ರಭಾರ ಪೌರಾಯುಕ್ತ ಶಿವಾನಂದ ಹಿರೇಮಠ, ಶಹರ ಠಾಣೆಯ ಎಸ್.ಐ. ಕೆ.ವಾಲಿಕರ, ಹೆಸ್ಕಾಂ ಇಒ ಎಸ್.ಪಿ. ವರಾಳೆ, ನಿವೃತ್ತ ಶಿಕ್ಷಕ ವಿಠಲ ಹಟ್ಟಿ ಇದ್ದರು.
ಶಿಕ್ಷಕ ರಾಮಚಂದ್ರ ಕಾಕಡೆ ಸ್ವಾಗತಿಸಿದರು. ಲಕ್ಷ್ಮಣ ಮಲ್ಲಾಪೂರೆ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.