ADVERTISEMENT

ರನ್ ವೇ, ಟರ್ಮಿನಲ್‌ಗೆ 57 ಎಕರೆ ಜಮೀನು

ಸಾಂಬ್ರಾ ವಿಮಾನ ನಿಲ್ದಾಣ ಅಭಿವೃದ್ಧಿ: ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಭರವಸೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2023, 13:51 IST
Last Updated 8 ನವೆಂಬರ್ 2023, 13:51 IST
ಬೆಳಗಾವಿಯ ಬಳಿಯ ಸಾಂಬ್ರಾ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಸಂಬಂಧಿಸಿದಂತೆ ಬುಧವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಮಾತನಾಡಿದರು
ಬೆಳಗಾವಿಯ ಬಳಿಯ ಸಾಂಬ್ರಾ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಸಂಬಂಧಿಸಿದಂತೆ ಬುಧವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ಮಾತನಾಡಿದರು   

ಬೆಳಗಾವಿ: ‘ಸಮೀಪದ ಸಾಂಬ್ರಾ ವಿಮಾನ‌ನಿಲ್ದಾಣದ ರನ್ ವೇ ಮತ್ತು ಟರ್ಮಿನಲ್ ವಿಸ್ತರಣೆಗಾಗಿ ಅಗತ್ಯವಿರುವ ಅಂದಾಜು 57 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು, ವಿಮಾನ ನಿಲ್ದಾಣಕ್ಕೆ ಒದಗಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಲಿದೆ’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ಜಮೀನು ಒದಗಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ರನ್ ವೇ ಮತ್ತು ಟರ್ಮಿನಲ್ ಜಮೀನು ಅಗತ್ಯತೆ ಹಾಗೂ ಅದರ ಸಮರ್ಪಕ ಬಳಕೆ ಕುರಿತು ನೀಲನಕ್ಷೆಯ ಸಮೇತ ಸಮಗ್ರ ವರದಿಯನ್ನು ಸಲ್ಲಿಸಬೇಕು. ಇದನ್ನು ಆಧರಿಸಿ ಅಗತ್ಯದ ಅನುಸಾರ ಜಮೀನು ಒದಗಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಸ್ಥಳೀಯ ಜನರಿಗೆ ಪರ್ಯಾಯ ರಸ್ತೆ ಮತ್ತಿತರ ಸೌಕರ್ಯಗಳನ್ನು ಒದಗಿಸುವ ಬಗ್ಗೆ ವಿಮಾನ ನಿಲ್ದಾಣದ ನಿರ್ದೇಶಕರು ಸ್ಪಷ್ಟ ಹಾಗೂ ಲಿಖಿತ ಮಾಹಿತಿಯನ್ನು ಒದಗಿಸಬೇಕು’ ಎಂದೂ ಅವರು ಅಧಿಕಾರಿಗಳಿಗೆ ಸೂಚಿಸಿದರು.‌

‘ಈಗಾಗಲೇ ಸಾಕಷ್ಟು ಜಮೀನು ಒದಗಿಸಲಾಗಿದೆ. ಆದ್ದರಿಂದ ರನ್ ವೇ ಮತ್ತು ಟರ್ಮಿನಲ್ ವಿಸ್ತರಣೆ, ಸಿಗ್ನಲ್‌ ದೀಪಗಳ ಅಳವಡಿಕೆಗೆ ಅತ್ಯಗತ್ಯವಾಗಿರುವ ಜಮೀನು ಮಾತ್ರ ಒದಗಿಸಲಾಗುವುದು. ಸಾಧ್ಯವಾದಷ್ಟು ಕಾಮಗಾರಿಗಳನ್ನು ಈಗಾಗಲೇ ಒದಗಿಸಲಾಗಿರುವ ಜಮೀನಿನಲ್ಲಿ ಕೈಗೊಳ್ಳಬೇಕು. ಟರ್ಮಿನಲ್ ವಿಸ್ತರಣೆಗೆ ಎಷ್ಟೇ ಜಮೀನು ಅಗತ್ಯವಿದ್ದರೂ ಅದನ್ನು ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಅವರು ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ವಾಯುಸೇನೆ ಅಧಿಕಾರಿಗಳೊಂದಿಗೆ ಸಮನ್ವಯ:

‘ಈಗಾಗಲೇ ಸ್ಮಶಾನ ಭೂಮಿಯನ್ನು ಒದಗಿಸಲಾಗಿದೆ. ಬೆಳಗಾವಿ ವಿಮಾನ ನಿಲ್ದಾಣ ಅಭಿವೃದ್ಧಿಗೆ ಭೂಸ್ವಾಧೀನ ಮಾಡಿಕೊಂಡಿರುವ ಜಮೀನಿನಲ್ಲಿ 14.05 ಎಕರೆ ಜಮೀನು ಏರ್‌ಫೋರ್ಸ್ ಸ್ವಾಧೀನದಲ್ಲಿ ಇರುವುದರಿಂದ, ಪರಸ್ಪರ ಚರ್ಚಿಸಿ ಬಗೆಹರಿಸಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಹೇಳಿದರು.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದ‌ ನಿರ್ದೇಶಕ ತ್ಯಾಗರಾಜನ್ ಮಾತನಾಡಿ, ‘ರನ್ ವೇ ಮತ್ತು ಟರ್ಮಿನಲ್ ವಿಸ್ತರಣೆಗೆ ಅಗತ್ಯವಿರುವ ಜಮೀನು ಒದಗಿಸುವುದರ ಜತೆಗೆ ಇನ್ನಿತರ ಸೌಕರ್ಯಗಳನ್ನು ಒದಗಿಸಬೇಕು’ ಎಂದು ಮನವಿ ಮಾಡಿದರು.

‘ಸ್ಥಳೀಯರಿಗೆ ಪರ್ಯಾಯ ರಸ್ತೆ‌ ನಿರ್ಮಾಣ ಮತ್ತಿತರ‌ ಕಾಮಗಾರಿಗಳಿಗೆ ಅನುಮೋದನೆ ಪಡೆದುಕೊಳ್ಳಲಾಗುವುದು’ ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಭೂದಾಖಲೆಗಳ ಇಲಾಖೆಯ ಉಪನಿರ್ದೇಶಕ ವಿಜಯಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Highlights - ಶೀಘ್ರ ಕಾಮಗಾರಿ ಆರಂಭಕ್ಕೆ ಸೂಚನೆ ರಸ್ತೆ, ವಿದ್ಯುದ್ದೀಕರಣದ ಮಾಹಿತಿ ಕೋರಿದ ಡಿ.ಸಿ ಮೂಲ ಸೌಕರ್ಯ ಒದಗಿಸಲು ಅಧಿಕಾರಿಗಳ ಕೋರಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.