ADVERTISEMENT

₹30.83 ಕೋಟಿ ಮೊತ್ತದ ಯೋಜನೆ ಪ್ರಸ್ತಾವಕ್ಕೆ ಆಡಳಿತಾತ್ಮಕ ಅನುಮೋದನೆ: ಜೊಲ್ಲೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2023, 7:39 IST
Last Updated 4 ಡಿಸೆಂಬರ್ 2023, 7:39 IST
ಶಾಸಕಿ ಶಶಿಕಲಾ ಜೊಲ್ಲೆ
ಶಾಸಕಿ ಶಶಿಕಲಾ ಜೊಲ್ಲೆ   

ನಿಪ್ಪಾಣಿ: ‘ನಗರಕ್ಕೆ ಕುಡಿಯುವ ನೀರು ಸರಬರಾಜು ಕಾಮಗಾರಿಗೆ ಕೇಂದ್ರ ಸರ್ಕಾರ ಪುರಸ್ಕೃತ ಅಮೃತ 2.0 ಯೋಜನೆಯಡಿ ₹ 30.83 ಕೋಟಿ ಪ್ರಸ್ತಾವಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಶೀಘ್ರದಲ್ಲಿ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು’ ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಯೋಜನೆಯನ್ನು ನಗರದ ಮುಂದಿನ 50 ವರ್ಷಗಳ ಕಾಲಾವಧಿಯ ಜನಸಂಖ್ಯೆಯ ಆಧಾರದ ಮೇಲೆ ಲೆಕ್ಕಾಚಾರ ಮಾಡಿ ರೂಪುರೇಷೆ ಸಿದ್ಧಪಡಿಸಿ ಕಾಮಗಾರಿಯ ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್) ಸಿದ್ಧಪಡಿಸಲಾಗಿತ್ತು’ ಎಂದರು.

‘ರಾಜ್ಯ ಸರ್ಕಾರದ ಕರ್ನಾಟಕ ನಗರ ನೀರು ಸರಬರಾಜು ಹಾಗು ಒಳಚರಂಡಿ ಮಂಡಳಿ ಇಲಾಖೆಯಿಂದ ಅನುಷ್ಠಾನಗೊಳ್ಳಲಿರುವ ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ಶೇ 50, ರಾಜ್ಯ ಸರ್ಕಾರದಿಂದ ಶೇ 40 ಹಾಗೂ ಸ್ಥಳೀಯ ನಗರಸಭೆಯಿಂದ ಶೇ 10 ರಷ್ಟು ಅನುದಾನ ದೊರೆಯಲಿದೆ. ವೇದಗಂಗಾ ನದಿಯ ದಡದಲ್ಲಿ 12 ಮೀ. ಸುತ್ತಳತೆಯ ಆರ್‌ಸಿಸಿ ಜಾಕವೆಲ್ ಕಮ್ ಪಂಪಹೌಸ್‌ ನಿರ್ಮಾಣ, 8x8 ಮೀಟರ್ ಟಿಸಿ ಪ್ಲಾಟ್‌ಫಾರ್ಮ್‌, 5 ಮೀ. ಅಗಲ 30 ಮೀ. ಉದ್ದದ ಕಾಲುಸೇತುವೆ ನಿರ್ಮಿಸಲಾಗುವುದು. ಈ ಜಾಕವೆಲ್‌ದಿಂದ ಜವಾಹರ ಜಲಾಶಯದವರೆಗೆ 7.7 ಕಿ.ಮೀ. ಉದ್ದದ ಪೈಪಲೈನ್ ನಿರ್ಮಾಣ ಮತ್ತು ಅಗೆದ ರಸ್ತೆ ಮರುನಿರ್ಮಾಣ ಕಾಮಗಾರಿ ಒಳಗೊಂಡಿದೆ. ಜತೆಗೆ ವಲಯ-1 ರಲ್ಲಿ 10 ಲಕ್ಷ ಲೀ. ಕ್ಷಮತೆಯ ಮೇಲ್ಮಟ್ಟದ ಜಲಸಂಗ್ರಹಾಲಯ (ಓಎಚ್‌ಟಿ) ಮತ್ತು ವಲಯ-2 ರಲ್ಲಿ ರಲ್ಲಿ 5 ಲಕ್ಷ ಲೀ. ಕ್ಷಮತೆಯ ಮೇಲ್ಮಟ್ಟದ ಜಲಸಂಗ್ರಹಾಲಯ (ಓಎಚ್‌ಟಿ)ಗಳನ್ನು ನಿರ್ಮಿಸಲಾಗುವುದು. ಮನೆಗೆ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆಯಲ್ಲಿ ಯಾವುದೇ ಕೊರತೆಗಳಾಗದಂತೆ ಅನುಷ್ಠಾನಗೊಳಿಸಲಾಗುವುದು’ ಎಂದರು.

ADVERTISEMENT

ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಸಂಚಾಲಕ ಮಹಾಲಿಂಗ ಕೋಠಿವಾಲೆ, ರಾಜೇಂದ್ರ ಗುಂದೆಶಾ, ನಗರಸಭೆ ಮಾಜಿ ಉಪಾಧ್ಯಕ್ಷ ಸುನೀಲ ಪಾಟೀಲ, ನೀತಾ ಬಾಗಡೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.