ಬೆಳಗಾವಿ: ‘ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನಲ್ಲಿ ಗಟ್ಟಿಯಾದ ವಾದ ಮಂಡಿಸಲು ಅನುಕೂಲವಾಗುವಂತೆ ಪರಿಣತ ವಕೀಲರ ತಂಡ ರಚಿಸಬೇಕು. ತಕ್ಷಣ ಸರ್ವ ಪಕ್ಷೀಯ ಸಭೆ ಕರೆದು ಚರ್ಚಿಸಬೇಕು’ ಎಂದು ಆಗ್ರಹಿಸಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
18 ವರ್ಷಗಳಿಂದ ಸುಪ್ರೀಂಕೋರ್ಟ್ನಲ್ಲಿರುವ ಈ ವಿವಾದವು ಮಂಗಳವಾರ (ಆಗಸ್ಟ್ 30) ವಿಚಾರಣೆಗೆ ಬಂದಿತು. ತ್ರಿಸದಸ್ಯ ಪೀಠವು ವಿಚಾರಣೆಯನ್ನು ಇದೇ ನವೆಂಬರ್ 23ಕ್ಕೆ ಮುಂದೂಡಿತು. ಈ ವಿಚಾರವಾಗಿ ಮುಖ್ಯಮಂತ್ರಿಗೆ ಪತ್ರ ಬರೆದ ಅಶೋಕ ಚಂದರಗಿ, ಗಡಿ ವಿವಾದಕ್ಕೆ ಅಂತ್ಯಹಾಡಲು ರಾಜ್ಯ ಸರ್ಕಾರ ಗಂಭೀರ ಹೆಜ್ಜೆ ಇಡಬೇಕು ಎಂದೂ ಕೋರಿದ್ದಾರೆ.
‘ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಗಡಿ ಉಸ್ತುವಾರಿ ಸಮಿತಿ ಇದೆ. ನಗರ– ಪಟ್ಟಣ– ಹಳ್ಳಿ ಸೇರಿ 865 ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ವಾದ ಅವರದು. ಆದರೆ, ನಮ್ಮ ಸರ್ಕಾರ ಜಾರಿಗೆ ತಂದ ಗಡಿ ಸಂರಕ್ಷಣಾ ಆಯೋಗವು ಸಂಪೂರ್ಣ ನಿಷ್ಕ್ರಿಯವಾಗಿದೆ. 2018ರಿಂದ ಈವರೆಗೆ ಗಡಿ ಉಸ್ತುವಾರಿ ಸಚಿವರೇ ಇಲ್ಲ. ಸರ್ಕಾರ ಇಂಥ ಗಂಭೀರ ವಿಷಯವನ್ನು ಹಗುರವಾಗಿ ಪರಿಗಣಿಸಬಾರದು’ ಎಂದೂ ಅವರು ಕೋರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.