ADVERTISEMENT

ಬಂದ್‌ಗೆ ಎಐಡಿಎಸ್‌ಒ ಬೆಂಬಲ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 8:00 IST
Last Updated 26 ಸೆಪ್ಟೆಂಬರ್ 2020, 8:00 IST

ಬೆಳಗಾವಿ: ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಅಂಗೀಕರಿಸಿರುವ, ರೈತರ ಬದುಕನ್ನು ಮತ್ತಷ್ಟು ದುರ್ಬರಗೊಳಿಸುವ ಎಪಿಎಂಸಿ ಕಾಯ್ದೆ ತಿದ್ದುಪಡಿ, ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ ಮೊದಲಾದವುಗಳನ್ನು ವಿರೋಧಿಸಿ ಅಖಿಲ ಭಾರತ ಸಂಘರ್ಷ ಸಮನ್ವಯ ಸಮಿತಿ ಕರೆ ನೀಡಿರುವ ಸೆ.28ರ ‘ಕರ್ನಾಟಕ ಬಂದ್‌’ಗೆ ಸಂಪೂರ್ಣ ಬೆಂಬಲ ನೀಡಲಾಗುವುದು’ ಎಂದುಎಐಡಿಎಸ್‌ಒ ತಿಳಿಸಿದೆ.

‘ಕೋವಿಡ್–19 ಸಂಕಷ್ಟದಲ್ಲಿರುವ ರೈತರಿಗೆ ಈ ಕಾಯ್ದೆಗಳಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪ್ರಜಾತಾಂತ್ರಿಕ ಚರ್ಚೆಗಳಿಗೆ ಕಿಂಚಿತ್ತೂ ಬೆಲೆ ನೀಡದೆ, ಕೋವಿಡ್ ಸಂದರ್ಭ ಬಳಸಿಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತರಾತುರಿಯಲ್ಲಿ ಅಂಗೀಕರಿಸುತ್ತಿರುವ ಕುತಂತ್ರವು ಬಯಲಾಗಿದೆ. ಇದರಿಂದ, ಕೃಷಿ ಉತ್ಪಾದನೆ ಮತ್ತು ಮಾರುಕಟ್ಟೆ ಕ್ಷೇತ್ರಗಳಲ್ಲಿ ಕಾರ್ಪೊರೇಟ್‌ ಕಂಪನಿಗಳು ಲಗ್ಗೆ ಇಟ್ಟು ಸಣ್ಣ ಮತ್ತು ಮಧ್ಯಮ ವರ್ಗದ ರೈತರು ನಾಶವಾಗುತ್ತಾರೆ. ಮಧ್ಯಮ ವರ್ಗದ ವ್ಯಾಪಾರಿಗಳು ಕೂಡ ದಿವಾಳಿಯಾಗುತ್ತಾರೆ. ಇದನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟವನ್ನು ಎಲ್ಲರೂ ಬೆಂಬಲಿಸಬೇಕು’ ಎಂದು ಜಿಲ್ಲಾ ಸಂಘಟಕ ಮಹಾಂತೇಶ ಬಿಳೂರ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT