ಘಟಪ್ರಭಾ: ಇಲ್ಲಿಯ ರೈಲ್ವೆ ನಿಲ್ದಾಣದ ಎರಡನೇ ಪ್ಲಾಟ್ಫಾರ್ಮ್ ದಾಟಲು ಅವಕಾಶ ನೀಡುವಂತೆ ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕರಿಗೆ ಸೂಪರಿಟೆಂಡೆಂಟ್ ಭರಮು ಅಸೋದೆ ಮೂಲಕ ಸಾರ್ವಜನಿಕರು ಮನವಿ ಸಲ್ಲಿಸಿದರು.
ದಿನದಿಂದ ದಿನಕ್ಕೆ ಪಟ್ಟಣ ಬೆಳೆಯುತ್ತಿದ್ದು, ಗ್ರಾಮದ ಬದಿಗಿದ್ದ ರೈಲು ನಿಲ್ದಾಣವೀಗ ಮಧ್ಯದಲ್ಲಿ ಬಂದಿದೆ. ನಿಲ್ದಾಣದ ಪಶ್ಚಿಮ ದಿಕ್ಕಿನಲ್ಲಿ ಮಠ-ಮಂದಿರ, ಮಸೀದಿ,ಆಸ್ಪತ್ರೆ ಇದ್ದು ನಿತ್ಯ ನೂರಾರು ಸಾರ್ವಜನಿಕರು, ಪ್ರಯಾಣಿಕರು, ರೋಗಿಗಳು ಮತ್ತು ಶಾಲಾ ಮಕ್ಕಳು ಸಂಚರಿಸುತ್ತಾರೆ. ಶಾಲಾ ಕಾಲೇಜುಗಳು ಮತ್ತು ಮಾರುಕಟ್ಟೆ ನಿಲ್ದಾಣದ ಪೂರ್ವಕ್ಕೆ ಇರುವುದರಿಂದ ಸಾರ್ವಜನಿಕರು ಈ ಕಡೆ ಬರಬೇಕಾದರೆ ರೈಲು ಮಾರ್ಗ ದಾಟಿ ಬರಬೇಕು.
ಇಲ್ಲಿಯವರೆಗೆ ಸಾರ್ವಜನಿಕರು ಪ್ಲಾಟ್ಫಾರ್ಮ್ ದಾಟಿ ಸಂಚರಿಸುತ್ತಿದ್ದರು. ಆದರೆ ಕೆಲದಿನಗಳಿಂದ ದಾಟದಂತೆ ನಿಲ್ದಾಣದ ಪಶ್ಚಿಮ ದಿಕ್ಕಿಗೆ ತಡೆಗೋಡೆ ನಿರ್ಮಿಸಿದ್ದರಿಂದ ಸಾರ್ವಜನಿಕರ ಸಂಚಾರಕ್ಕೆ ಅಡತಡೆ ಉಂಟಾಗಿದೆ.
ಸಣ್ಣ ಪುಟ್ಟ ಕೆಲಸಕ್ಕೂ ಸುತ್ತು ಹಾಕಿ ಬರಬೇಕಾಗಿದ್ದು, ಸಣ್ಣ-ಪುಟ್ಟ ಮಕ್ಕಳಿಗೆ ಹಾಗೂ ವಯೋವೃದ್ಧರಿಗೆ ತೊಂದರೆಯಾಗುತ್ತಿದೆ. ಮೊದಲಿನಂತೆ ಸಾರ್ವಜನಿಕರು ಪ್ಲಾಟ್ಫಾರ್ಮ್ ದಾಟಲು ಅವಕಾಶ ಕಲ್ಪಿಸಿಕೊಡಿ ಎಂದು ಅಧಿಕಾರಿಗಳಿಗೆ ನೀಡಿದ ಮನವಿ ಪತ್ರದಲ್ಲಿ ವಿನಂತಿಸಲಾಗಿದೆ.
ಈಗಾಗಲೆ ಕ್ಷೇತ್ರದ ಶಾಸಕರು ಮತ್ತು ಸಂಸದರಿಗೆ ಸಮಸ್ಯೆ ಬಗ್ಗೆ ವಿವರಿಸಲಾಗಿದ್ದು, ಪರಿಹಾರ ನೀಡುವ ಭರವಸೆ ನೀಡಿದ್ದಾರೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಹಿರಿಯರಾದ ಡಿ.ಎಂ.ದಳವಾಯಿ, ರಾಮಣ್ಣಾ ಹುಕ್ಕೇರಿ, ಸುರೇಶ ಪಾಟೀಲ ಪರಶುರಾಮ ಕಲಕುಟಗಿ, ಶೇಖರ ಕುಲಗೂಡ, ಚಿರಾಕಲಿಶಾ ಮಕಾನದಾರ, ಮಡಿವಾಳಪ್ಪಾ ಮುಚಳಂಬಿ ಸೇರಿದಂತೆ ಅನೇಕರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.