ಬೆಳಗಾವಿ: ಇಲ್ಲಿನ ಸದಾಶಿವ ನಗರದಲ್ಲಿ ನಿರ್ಮಿಸಿದ ಅಮ್ಮಾ ಭಗವಾನ್ ಅವರ ಮಂದಿರ ಲೋಕಾರ್ಪಣೆ ಅಂಗವಾಗಿ, ನಗರದಲ್ಲಿ ಭಾನುವಾರ ಭವ್ಯ ಶೋಭಾ ಯಾತ್ರೆ ನಡೆಯಿತು.
ಪುಷ್ಪಾಲಂಕೃತ ಸಾರೋಟದಲ್ಲಿ ಅಮ್ಮಾ ಭಗವಾನ್ ಅವರ ಭಾವಚಿತ್ರಗಳನ್ನು ಇಟ್ಟು ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಇಲ್ಲಿನ ಧರ್ಮವೀರ ಸಂಭಾಜಿ ವೃತ್ತದಿಂದ ಆರಂಭವಾದ ಮೆರವಣಿಗೆಯು ಲಿಂಗರಾಜ ಕಾಲೇಜು ರಸ್ತೆ, ರಾಣಿ ಚನ್ನಮ್ಮ ವೃತ್ತ, ಅಂಬೇಡ್ಕರ್ ಮಾರ್ಗವಾಗಿ ಸಂಚರಿಸಿ ಸದಾಶಿವ ನಗರದ ನೂತನ ಮಂದಿರ ತಲುಪಿತು.
ವಿವಿಧ ವಾದ್ಯ ಮೇಳಗಳು ಮೆರವಣಿಗೆಗೆ ಕಳೆ ತಂದವು. ಪಲ್ಲಕ್ಕಿಯಲ್ಲಿ ಅಮ್ಮ ಅವರ ಉತ್ಸವ ಮೂರ್ತಿಯನ್ನು ಇಟ್ಟು, ಭಕ್ತರು ಹೊತ್ತು ಸಾಗಿದರು. ಅದರ ಮುಂದೆ ಬಣ್ಣಬಣ್ಣಗಳಿಂದ ಅಲಂಕರಿಸಿದ ಎತ್ತಿನ ಬಂಡಿಗಳು ಸಾಗಿದವು. ಪೂರ್ಣಕುಂಭ ಹೊತ್ತ ಮಹಿಳೆಯರ ತಂಡ ಇದರ ಹಿಂದೆ ಸಾಗಿತು. ಸಮವಸ್ತ್ರದಲ್ಲಿ ಶಿಸ್ತಿನಿಂದ ಪಾಲ್ಗೊಂಡಿದ್ದ ಹಲವಾರು ಮಹಿಳೆಯರು ಮಾರ್ಗದುದ್ದಕ್ಕೂ ಭಕ್ತಿ ಹಾಡು, ಸಂಗೀತಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಸಾಂಪ್ರದಾಯಿಕ ವೇಷಭೂಷಣದಲ್ಲಿ ಬಂದ ಯುವಕ– ಯುವತಿಯರು ಕೇಸರಿ ಪೇಠಾ ಧರಿಸಿ, ಡೋಲುಗಳನ್ನು ಬಾರಿಸಿ, ಹಾಡಿ ಕುಣಿದು ಸಂಭ್ರಮಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.