ಅಥಣಿ: ‘ತಂದೆ–ತಾಯಿಯ ಮೇಲೆ ಸಾಕಷ್ಟು ಜವಾಬ್ದಾರಿ ಇದೆ. ಮಕ್ಕಳಿಗೆ ಪರಿಶ್ರಮದ ಬಗ್ಗೆ ಕಲಿಸಿದರೆ ಸಾಕು. ಅವರಿಗೆ ಒಂದು ಒಳ್ಳೆಯ ಪಲಿತಾಂಶ ಸಿಕ್ಕೇ ಸಿಗುತ್ತದೆ’ ಎಂದು ಶೇಗುಣಸಿ ವಿರಕ್ತಮಠದ ಮಹಾಂತ ದೇವರು ಹೇಳಿದರು.
ಇಲ್ಲಿನ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಶಾಲೆಯ ಪಾಲಕರಿಗೆ ‘ಆದರ್ಶ ಅಪ್ಪ ಅಮ್ಮ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಎಲ್ಲರೂ ಪಲಿತಾಂಶದ ಮೇಲೆ ದೃಷ್ಟಿ ಇಡುತ್ತಾರೆಯೇ ಹೊರತು ಪರಿಶ್ರಮದ ಮೆಲೆ ದೃಷ್ಟಿ ಇಡುವುದಿಲ್ಲ. ಸಾಧಕರೆಲ್ಲರೂ ಚಿಕ್ಕಂದಿನಿಂದಲೂ ಕಠಿಣ ಪರಿಶ್ರಮಪಟ್ಟಿರುತ್ತಾರೆ. ಇದನ್ನು ಮಕ್ಕಳಿಗೆ ತಿಳಿಸಬೇಕು. ಆನಂದವಾಗಿರುವುದನ್ನು ಅವರಿಗೆ ಕಲಿಸಬೇಕು’ ಎಂದು ಸಲಹೆ ನೀಡಿದರು.
ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ. ರಾಜೀವ ಮಾತನಾಡಿ, ‘ಶಾಲೆಗಳು ಸಾಮಾನ್ಯವಾಗಿ ಮಕ್ಕಳ ಮೇಲೆ ಮಾತ್ರ ಗಮನ ಕೊಡುತ್ತವೆ. ಆದರೆ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆ ಪಾಲಕರ ಮೇಲೂ ಗಮನ ಕೊಡುತ್ತಿರುವುದು ಅಭಿನಂದನಾರ್ಹ. ಈ ಶಾಲೆಯಿಂದ ಹೊರ ಹೋಗುವವರು ಅಸಾಮಾನ್ಯರಾಗಿರುತ್ತಾರೆ’ ಎಂದರು.
ನಿವೃತ್ತ ಮುಖ್ಯಶಿಕ್ಷಕ ಅಮರೇಶ ಬಿರಾದರ, ‘ಮಕ್ಕಳನ್ನು ಉತ್ತಮವಾಗಿ ರೂಪಿಸುವ ನಿಟ್ಟಿನಲ್ಲಿ ಶಿಕ್ಷಕರೊಂದಿಗೆ ಪಾಲಕರ ಜವಾಬ್ದಾರಿಯೂ ಇದೆ’ ಎಂದು ತಿಳಿಸಿದರು.
ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಸಿದ್ಧಾರೂಢ ಸವದಿ, ಚಿಕ್ಕಟ್ಟಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುರೇಶ ಚಿಕ್ಕಟ್ಟಿ ಮಾತನಾಡಿದರು.
10ನೇ ತರಗತಿ ವಿದ್ಯಾರ್ಥಿ ಶ್ರೇಯಾ ದಾನಪ್ಪನ್ನವರ ಬರೆದ ‘ಮನದಾಳ ತಿಳಿದಾಗ’ ಪುಸ್ತಕ ಬಿಡುಗಡೆ ಮಾಡಲಾಯಿತು.
ಈ ವೇಳೆ ನೌಕರರ ಸಂಘದ ಅಧ್ಯಕ್ಷ ರಾಮಣ್ಣ ದರಿಗೌಡ, ಸಂಸ್ಥೆ ಕಾರ್ಯದರ್ಶಿ ಸದಾಶಿವ ಚಿಕ್ಕಟ್ಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.