ಅಥಣಿ: ‘ಶರಣರ ತತ್ವಗಳ ಅಳವಡಿಕೆಯಿಂದ ಮೂಢನಂಬಿಕೆಗಳನ್ನು ಹೋಗಲಾಡಿಸಬಹುದು. ಗ್ರಹಣವೆಂದರೆ, ಅಶುಭ ಗಳಿಗೆಯಲ್ಲ. ಅದು ನೈಸರ್ಗಿಕ ಪ್ರಕ್ರಿಯೆಯಾಗಿದೆ. ಅದನ್ನು ನಾವು ವೈಚಾರಿಕ ಮನೋಭಾವದಿಂದ ಸ್ವೀಕರಿಸಬೇಕು’ ಎಂದು ಡಾ.ಸಂಜೀವ ಕುಲಕರ್ಣಿ ಹೇಳಿದರು.
ಇಲ್ಲಿನ ಸಂತರಾಮ ಪದವಿ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಗ್ರಹಣ ಪ್ರಸಾದ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.
‘ಗ್ರಹಣದ ಸಂದರ್ಭದಲ್ಲಿ ಕಾಲೇಜಿನ ಮಕ್ಕಳ ಜೊತೆ ಸೇರಿ ಅಡುಗೆ ತಯಾರಿಸಿ ಸೇವಿಸುವುದು, ಈ ಮೂಲಕ ಮೂಢನಂಬಿಕೆ ಹೋಗಲಾಡಿಸುವ ಕಾರ್ಯಕ್ರಮ ಇದಾಗಿದೆ. ಸಮಾಜವನ್ನು ತಿದ್ದುವ ಹಾಗೂ ಮೂಢನಂಬಿಕೆಯ ಭೂತ ಹೊಡೆದೋಡಿಸುವ ಪ್ರಯತ್ನವಾಗಿದೆ. ಗ್ರಹಣದ ವಾಸ್ತವಾಂಶ ತಿಳಿಸಲು ಇಂತಹ ವೈಚಾರಿಕ ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯಬೇಕು. ಜನರು ಪ್ರಜ್ಞಾವಂತರಾಗಬೇಕು’ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಸುಧೀಂದ್ರ ಕುಲಕರ್ಣಿ ಮಾತನಾಡಿ, ‘ಅಂಧಶ್ರದ್ಧೆಯ ನಿರ್ಮೂಲನೆ ಆಗಬೇಕಾದರೆ ಎಲ್ಲರೂ ಶಿಕ್ಷಿತರಾಗಬೇಕು. ಕೆಲವು ಶಿಕ್ಷಣವಂತರು ಇನ್ನೂ ಮೌಢ್ಯವನ್ನು ಬಿಟ್ಟಿಲ್ಲ ಎನ್ನುವುದು ವಿಷಾದದ ಸಂಗತಿಯಾಗಿದೆ’ ಎಂದರು.
ಸಂಸ್ಥೆಯ ಕಾರ್ಯಾಧ್ಯಕ್ಷ ಬಿ.ಎಲ್. ಪಾಟೀಲ ಮಾತನಾಡಿ, ‘ಸಮಾಜದಲ್ಲಿರುವ ಮೂಢನಂಬಿಕೆಗಳನ್ನು ಹೋಗಲಾಡಿಸಬೇಕಾದರೆ ಮೊದಲು ನಮ್ಮ ಮನೆಯಲ್ಲಿನ ಮೂಢನಂಬಿಕೆಗಳನ್ನು ತೊಲಗಿಸಬೇಕು. ಮೂಢನಂಬಿಕೆಯನ್ನು ಬಂಡವಾಳವಾಗಿಟ್ಟುಕೊಂಡು ಕೆಲವರು ತಮ್ಮ ಆದಾಯ ಮಾಡಿಕೊಳ್ಳುತ್ತಿದ್ದಾರೆ. ಇದು ಕಳವಳಕಾರಿಯಾಗಿದೆ’ ಎಂದು ಹೇಳಿದರು.
ಶೆಟ್ಟರಮಠದ ಮರುಳಸಿದ್ದ ಸ್ವಾಮೀಜಿ ಮಾತನಾಡಿ, ‘ಅಂಧ ಶ್ರದ್ಧೆಯ ಮೂಲಕ ಯಾರಿಗೂ ತೊಂದರೆ ಕೊಡಬಾರದು’ ಎಂದು ತಿಳಿಸಿದರು.
ಡಾ.ರಮೇಶ ಗುಳ್ಳ, ಶಿವಪುತ್ರ ಯಾದವಾಡ ಮಾತನಾಡಿದರು.
ಭಾರತಿ ಪಾಟೀಲ, ವಿಲಾಸ ಕುಲಕರ್ಣಿ, ಎಂ.ಎನ್. ಅಸ್ಕಿ, ಭಾರತಿ ಬಿಜಾಪೂರೆ, ಎಸ್.ಟಿ. ಚಿಗರೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.