
ಅಥಣಿ: ಜಿಲ್ಲೆ ವಿಭಜಿಸುವುದಾದರೆ ಜಿಲ್ಲಾ ಕೇಂದ್ರದಿಂದ ದೂರ ಇರುವ ಅಥಣಿಯನ್ನು ಜಿಲ್ಲೆ ಎಂದು ಘೋಷಿಸುವಂತೆ ಆಗ್ರಹಿಸಿ ಜಿಲ್ಲಾ ಹೋರಾಟ ಸಮಿತಿಯು ಪ್ರಶಾಂತ ತೋಡಕರ ನೇತೃತ್ವದಲ್ಲಿ ಕರೆ ನೀಡಿದ್ದ ಬಂದ್ ಬುಧವಾರ ಯಶಸ್ವಿಯಾಯಿತು.
ವ್ಯಾಪಾರಸ್ಥರು, ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಶಿಕ್ಷಕರು ಮತ್ತು ಉಪನ್ಯಾಸಕರು, ಮಾಜಿ ಸೈನಿಕರು, ವಕೀಲರ ಸಂಘ, ನಿವೃತ್ತ ನೌಕರರ ಸಂಘ, ಪತ್ರಕರ್ತರ ಸಂಘ, ರೈತ ಸಂಘಟನೆ ಹಾಗೂ ಕನ್ನಡಪರ ಸಂಘಟನೆಗಳು ಸೇರಿದಂತೆ ಅನೇಕ ಮುಖಂಡರು ಯೋರಾಟದಲ್ಲಿ ಭಾಗವಹಿಸಿದ್ದರು.
ಗಚ್ಚಿನ ಮಠದಿಂದ ಶಿವಬಸವ ಸ್ವಾಮೀಜಿ ಹಾಗೂ ಶೆಟ್ಟರ ಮಠದ ಮರುಳಸಿದ್ದ ಸ್ವಾಮೀಜಿ ನೇತೃತ್ವದಲ್ಲಿ ಮೆರವಣಿಗೆ ಆರಂಭಿಸಲಾಯಿತು. ಅಂಬೇಡ್ಕರ್ ವೃತ್ತದಲ್ಲಿ ಬಸವಣ್ಣ ಹಾಗೂ ಅಂಬೇಡ್ಕರ್ ಚಿತ್ರಗಳಿಗೆ ಮಾಲಾರ್ಪಣೆ ಮಾಡಿ ಪ್ರತಿಭಟನೆ ಆರಂಭಿಸಲಾಯಿತು.
ಶಿವಬಸವ ಸ್ವಾಮೀಜಿ ಮಾತನಾಡಿ, ‘ನಮ್ಮ ಜನಪ್ರತಿನಿಧಿಗಳು ಜನರ ಅಶೋತ್ತರಗಳಿಗೆ ಸ್ಪಂದಿಸಬೇಕು. ಅಥಣಿ ಮತ್ತು ಸುತ್ತಮುತ್ತಲಿನ ಮತಕ್ಷೇತ್ರಗಳ ಶಾಸಕರು ಒಗ್ಗಟ್ಟಿನಿಂದ ಮುಖ್ಯಮಂತ್ರಿಗಳ ಬಳಿ ಜಿಲ್ಲಾ ಕೇಂದ್ರದ ವಿಷಯವನ್ನು ಪ್ರಸ್ತಾಪಿಸಬೇಕು’ ಎಂದರು.
ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ, ಮಾಜಿ ಶಾಸಕ ಶಹಜಾನ ಡೊಂಗರಗಾವ, ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ, ಬಿಜೆಪಿ ಮುಖಂಡ ಗಿರೀಶ ಬುಟಾಳಿ, ಸಂಪತ್ ಕುಮಾರ್ ಶೆಟ್ಟಿ, ಮಾಜಿ ಸೈನಿಕರ ಸಂಘದ ಸಂಸ್ಥಾಪಕ ಅಧ್ಯಕ್ಷ ಗುರಪ್ಪ ಮಗದುಮ್ಮ, ಕನ್ನಡ ಪರ ಹೋರಾಟಗಾರ ಅಣ್ಣಾಸಾಹೇಬ ತೆಲಸಂಗ, ಶಬ್ಬೀರ್ ಸಾತಬಚ್ಚೆ, ಆಕಾಶ ನಂದಗಾವ, ಜಗನ್ನಾಥ ಬಾಮನೆ, ಶಶಿಧರ, ರಾವಸಾಬ ಐಹೊಳಿ, ರವಿ ಪೂಜಾರಿ, ಮನೋಹರ ಹಂಜಿ, ವಕೀಲರ ಸಂಘದ ಅಧ್ಯಕ್ಷ ಎ.ಎ. ಹುದ್ದಾರ, ನಿತೀಶ್ ಪಟ್ಟಣ ಮಾತನಾಡಿದರು.
ಉಪ ತಹಶೀಲ್ದಾರ್ ಬಿ.ವೈ. ಹೊಸಕೇರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಸಿ.ಎಂ ಭೇಟಿ ಇಂದು: ‘ಅಥಣಿ ಜಿಲ್ಲಾ ಕೇಂದ್ರ ಘೋಷಣೆಯ ಕುರಿತು ಶಾಸಕ ಲಕ್ಷ್ಮಣ ಸವದಿ ಮುಖ್ಯಮಂತ್ರಿ ಜೊತೆ ಮಾತನಾಡಿದ್ದಾರೆ. ಜಿಲ್ಲಾ ಹೋರಾಟ ಸಮಿತಿಯ ನಿಯೋಗವನ್ನು ಗುರುವಾರ ಸಿದ್ದರಾಮಯ್ಯ ಅವರೊಂದಿಗೆ ಭೇಟಿ ಮಾಡಿಸಲಿದ್ದಾರೆ’ ಎಂದು ಯುವ ಮುಖಂಡ ಶಿವಕುಮಾರ ಸವದಿ ತಿಳಿಸಿದರು.