
ನಿನಾಸಂ
ಅಥಣಿ: ರೋಟರಿ ಸಂಸ್ಥೆ ಹಾಗೂ ರಾಹುಬಹದ್ದೂರ್ ಮಂಗಸುಳಿ ಪ್ರತಿಷ್ಠಾನದ ಸಹಯೋಗದಲ್ಲಿ 70ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಪಟ್ಟಣದ ಗಚ್ಚಿನಮಠದ ಸಭಾಂಗಣದಲ್ಲಿ ಡಿ.3 ಮತ್ತು 4 ರಂದು ಸಂಜೆ 5.30 ರಿಂದ 7.30ರ ವರೆಗೆ ‘ನಿನಾಸಂ ನಾಟಕೋತ್ಸವ’ ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಕ್ಲಬ್ ನ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸುಳಿ ಹೇಳಿದರು.
ಪಟ್ಟಣದಲ್ಲಿ ನಡೆದ ರೋಟರಿ ಕ್ಲಬ್ ಪದಾಧಿಕಾರಿಗಳ ಸಭೆಯಲ್ಲಿ ನಾಟಕೋತ್ಸವದ ಕರಪತ್ರಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಕನ್ನಡ ನಾಡಿನ ರಂಗಭೂಮಿ ಕಲೆ, ಭಾಷೆ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಈ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ. ಅಂತರರಾಷ್ಟ್ರೀಯ ಭೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರ ಕಥೆ ಆಧರಿಸಿದ ‘ಹೃದಯದ ತೀರ್ಪು’ ನಾಟಕ ಪ್ರದರ್ಶನ ಜರುಗಲಿದೆ. ಈ ನಾಟಕವನ್ನು ಡಾ.ಎಂ.ಗಣೇಶ ನಿರ್ದೇಶಿಸಿದ್ದಾರೆ ಮತ್ತು ಮಳಯಾಳಂ ಮೂಲ ಕಥೆಯ ‘ಅವತರಣಂ ಭ್ರಾಂತಾಲಯಂ’ ನಾಟಕವನ್ನು ಜಿ. ಶಂಕರ ಪಿಳ್ಳೆ ರಚಿಸಿದ್ದಾರೆ. ನಾಟಕ ಪ್ರದರ್ಶನ ಉಚಿತವಾಗಿದೆ ಎಂದು ಹೇಳಿದರು.
ರೋಟರಿ ಸಂಸ್ಥೆಯ ತಾಲ್ಲೂಕು ಘಟಕದ ಅಧ್ಯಕ್ಷ ಸಚಿನ ದೇಸಾಯಿ ಮಾತನಾಡಿ, ಡಿ.3ರಂದು ಸಂಜೆ 5 ಗಂಟೆಗೆ ನಿನಾಸಂ ನಾಟಕೋತ್ಸವ ಉದ್ಘಾಟನಾ ಸಮಾರಂಭ ಜರುಗಲಿದ್ದು, ಗಚ್ಚಿನ ಮಠದ ಶಿವ ಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು, ಮುಖ ಅತಿಥಿಗಳಾಗಿ ಸಾಹಿತಿ ಅಪ್ಪಾಸಾಹೇಬ ಅಲಿಬಾದಿ, ಯುವ ಮುಖಂಡ ಶಿವು ಗುಡ್ಡಾಪುರ, ಉದ್ಯಮಿಗಳಾದ ರಾವಸಾಬ ಐಹೊಳೆ, ರವಿ ಪೂಜಾರಿ ಸೇರಿದಂತೆ ಇನ್ನಿತರರು ಆಗಮಿಸಲಿದ್ದಾರೆ ಎಂದರು.
ರೋಟರಿ ಸಂಸ್ಥೆಯ ಜಿಲ್ಲಾ ಪ್ರಾಂತಪಾಲ ಮೇಘರಾಜ್ ಫಾರಮಾರ, ಕಾರ್ಯದರ್ಶಿ ಶೇಖರ್ ಕೋಲಾರ, ಖಜಾಂಚಿ ಸಂತೋಷ ಬೊಮ್ಮಣ್ಣವರ, ಮಂಗಸುಳಿ ಪ್ರತಿಷ್ಠಾನದ ಅಧ್ಯಕ್ಷ ಎಂ.ಜಿ. ಹಂಜಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.