ರಾಮದುರ್ಗ: ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿರುವ ಕ್ರೀಡಾಪಟುಗಳಲ್ಲಿ ಮುಖ್ಯವಾಗಿ ಕ್ರೀಡಾಮನೋಭಾವನೆ ಇರಬೇಕು. ಅಂದಾಗ ಮಾತ್ರ ಕ್ರೀಡೆಗಳಿಗೆ ಮೌಲ್ಯ ಲಭಿಸಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಆಯುಕ್ತ ಚೇತನ್ ಆರ್., ಹೇಳಿದರು.
ರಾಮದುರ್ಗ ತಾಲ್ಲೂಕಿನ ಚಂದರಗಿಯ ಎಸ್.ಎಂ. ಕಲೂತಿ ಕ್ರೀಡಾ ವಸತಿ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಅಟ್ಯಾಪಟ್ಯಾ ಚಾಂಪಿಯನ್ಶಿಪ್ ಪಂದ್ಯಾಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪಂದ್ಯಾಟದಲ್ಲಿ ನಿರ್ಣಾಯಕರ ನಿರ್ಣಯಕ್ಕೆ ಎಲ್ಲ ಕ್ರೀಡಾಪಟುಗಳು ಗೌರವ ನೀಡಬೇಕು. ಸಣ್ಣಪುಟ್ಟ ಸಮಸ್ಯೆಗಳಿಗೆ ತಂಟೆತಕರಾರು ಮಾಡದೇ ಕ್ರೀಡಾಪಟುಗಳಿಗೆ ಇರುವ ಸಹನೆಯನ್ನು ತೋರಬೇಕು ಎಂದು ತಿಳಿಸಿದರು.
ದೇಶದಲ್ಲಿಯೇ ಸಹಕಾರ ತತ್ವದಡಿ ಚಂದರಗಿಯ ಕ್ರೀಡಾ ವಸತಿ ಶಾಲೆ ಆರಂಭಗೊಂಡಿದೆ. ಇಲ್ಲಿ ಎಲ್ಲ ತರಹದ ಕ್ರೀಡಾಪಟುಗಳು ಇದ್ದಾರೆ. ಇಲ್ಲಿಂದ ಹೊರಬರುವ ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ಸ್ಪರ್ಧೆ ಮಾಡಿ ಗೆದ್ದು ಬಂದಿದ್ದಾರೆ. ಇಂತ ಕ್ರೀಡೆಗಳನ್ನು ಈ ಶಾಲೆಯಲ್ಲಿ ಹಮ್ಮಿಕೊಂಡಿರುವುದು ಸಂತಸ ತಂದಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಅಟ್ಯಾಪಟ್ಯಾ ಕ್ರೀಡೆಗೆ ತಿಳ್ಳಿ, ಸರಗಿ ಎಂದು ಕರೆಯುವುದುಂಟು. ಅಟ್ಯಾಪಟ್ಯಾ ಕ್ರೀಡೆಯು ಗ್ರಾಮೀಣ ಕ್ರೀಡೆಯಾಗಿದೆ. ಇಂಥ ಕ್ರೀಡೆಗಳನ್ನು ಉಳಿಸಿಬೆಳೆಸಲು ಪ್ರೇರಣೆ ಸಿಗಬೇಕಿದೆ ಎಂದು ತಿಳಿಸಿದರು.
ತಮ್ಮ ಕ್ಷೇತ್ರದಲ್ಲಿ ರಾಷ್ಟ್ರೀಯ ಮಟ್ಟದ ಕ್ರೀಡೆಗಳು ನಡೆಯುತ್ತಿರುವುದರಿಂದ ಯಾವುದೇ ಅನಾನುಕೂಲ ಉಂಟಾಗದಂತೆ ಜಾಗೃತಿ ವಹಿಸಲಾಗಿದೆ. ಇದಕ್ಕೆ ಸ್ಪೋಕೋ ಸಂಸ್ಥೆಯೂ ಸಹಕಾರ ನೀಡಲಿದೆ. ಕ್ರೀಡಾಪಟುಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ತಿಳಿಸಿದರು.
ಪಂದ್ಯಾವಳಿಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸ್ಪೋಕೋ ಸಂಸ್ಥೆ ಅಧ್ಯಕ್ಷೆ ಮೃಣಾಲಿನಿ ಪಟ್ಟಣ, ಅಟ್ಯಾಪಟ್ಯಾ ಫೆಡರೇಶನ್ ಜನರಲ್ ಸೆಕ್ರೆಟರಿ ಡಿ.ಪಿ. ಕವೀಶ್ವರ ಮಾತನಾಡಿದರು. ಉಪಾಧ್ಯಕ್ಷ ಮಹೇಶ ಭಾತೆ ಸೇರಿದಂತೆ ಸ್ಪೋಕೊ ಸಂಸ್ಥೆಯ ಸದಸ್ಯರು ಹಾಜರಿದ್ದರು.
ಸ್ಪೋಕೋ ವ್ಯವಸ್ಥಾಪಕ ಜಗದೀಶ ಮೇಟಿ ಸ್ವಾಗತಿಸಿದರು. ಜಯಶ್ರೀ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಸತೀಶ ಪಾಟೀಲ ಪರಿಚಯಿಸಿದರು. ಪಾಂಡುರಂಗ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಐ.ಎಸ್. ಸೂಳಿಭಾವಿ ವಂದಿಸಿದರು.
ಈ ಪಂದ್ಯಾವಳಿಯಲ್ಲಿ ವಿವಿಧ ರಾಜ್ಯಗಳಿಂದ 18 ಪುರುಷರ ತಂಡಗಳು ಮತ್ತು 14 ಮಹಿಳಾ ತಂಡಗಳು ಸೇರಿದಂತೆ ಒಟ್ಟು 650 ಕ್ರೀಡಾಪಟುಗಳು ರಾಷ್ಟ್ರೀಯ ಅಟ್ಯಾಪಟ್ಯಾ ಸ್ಪರ್ಧೆಯಲ್ಲಿ ಪಾಲ್ಗೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.