ಚಿಕ್ಕೋಡಿ: ಚೆನ್ನೈನ ದಕ್ಷಿಣ ಭಾರತ ಕಬ್ಬು ಮತ್ತು ಸಕ್ಕರೆ ತಂತ್ರಜ್ಞರ ಸಂಸ್ಥೆಯು ಇಲ್ಲಿನ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಗೆ 2020-21ನೇ ಸಾಲಿಗೆ ಕರ್ನಾಟಕ ವಲಯದಲ್ಲಿ ಅತ್ಯುತ್ತಮ ಡಿಸ್ಟಿಲರಿ ಘಟಕ ಪ್ಲಾಟಿನಂ ಅವಾರ್ಡ್ ಮತ್ತು ಅತ್ಯುತ್ತಮ ತಾಂತ್ರಿಕ ನಿರ್ವಹಣೆ ಗೋಲ್ಡನ್ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಕಾರ್ಖಾನೆಯ ಅಧ್ಯಕ್ಷ ಭರತೇಶ ಬನವಣೆ, ಉಪಾಧ್ಯಕ್ಷ ಮಲ್ಲಿಕಾರ್ಜುನ ಕೋರೆ, ಸಂಚಾಲಕರಾದ ಅಮಿತ್ ಕೋರೆ, ಅಜೀತ ದೇಸಾಯಿ, ತಾತ್ಯಾಸಾಹೇಬ ಕಾಟೆ, ಸಂದೀಪ ಪಾಟೀಲ, ಬಾಳಗೌಡಾ ರೇಂದಾಳೆ, ರಾಮಚಂದ್ರ ನಿಶಾನದಾರ, ಮಲ್ಲಪ್ಪಾ ಮೈಶಾಳೆ, ಚೇತನ ಪಾಟೀಲ, ನಂದಕುಮಾರ ನಾಶೀಪುಡಿ ಹಾಗೂ ಡಿಸ್ಟಿಲರಿ ವ್ಯವಸ್ಥಾಪಕರಾದ ಆರ್.ಡಿ.ನಿಗವೆ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಸಂಜೀವ್ ದುಬೆ ಅವರು ಪ್ರಶಸ್ತಿ ಸ್ವೀಕರಿಸಿದರು.
ಕಾರ್ಖಾನೆಯ ರೂವಾರಿಗಳಾದ ರಾಜ್ಯಸಭಾ ಮಾಜಿ ಸದಸ್ಯ ಪ್ರಭಾಕರ ಕೋರೆ ಅವರ ಮಾರ್ಗದರ್ಶನ ಹಾಗೂ ಸಂಚಾಲಕ ಅಮಿತ ಪ್ರಭಾಕರ ಕೋರೆ ನೇತೃತ್ವದಲ್ಲಿ ಆಡಳಿತ ಮಂಡಳಿಯ ಸೂಕ್ತ ನಿರ್ಣಯ, ರೈತರ ಸಹಕಾರ ಮತ್ತು ಅಧಿಕಾರಿ ಹಾಗೂ ಕಾರ್ಮಿಕರ ಸತತ ಪ್ರಯತ್ನದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ ಎಂದು ಅಧ್ಯಕ್ಷ ಭರತೇಶ ಬನವಣೆ ತಿಳಿಸಿದರು.
ಕಡಿಮೆ ಅವಧಿಯಲ್ಲಿ ಹೆಚ್ಚು ಕಬ್ಬು ನುರಿಸಿ ಉತ್ತಮ ಇಳುವರಿಯೊಂದಿಗೆ ಸಕ್ಕರೆ ಉತ್ಪಾದನೆ ಮಾಡಿದೆ. ಇದರ ಜೊತೆಗೆ ಉಪ ಉತ್ಪನ್ನ ಘಟಕಗಳಾದ ಸಹವಿದ್ಯುತ್ ಮತ್ತು ಡಿಸ್ಟಿಲರಿ ಘಟಕಗಳು ಸಹ ಪೂರ್ಣ ಕ್ಷಮತೆಯೊಂದಿಗೆ ಕಾರ್ಯನಿರ್ವಹಿಸಿದ್ದಕ್ಕೆ ಈ ಪ್ರಶಸ್ತಿಗಳು ಲಭಿಸಿವೆ ಎಂದು ಹೊಸದೆಹಲಿಯ ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಹಾಮಂಡಳಿ ನಿರ್ದೇಶಕ ಅಮಿತ ಕೋರೆ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.