ಅಥಣಿ: ‘ಪ್ರಸ್ತುತ ಪ್ರಶಸ್ತಿಗಳು ಪ್ರಾಮಾಣಿಕ ಮತ್ತು ಪ್ರತಿಭಾವಂತರನ್ನು ಹುಡುಕಿಕೊಂಡು ಬರುವುದಿಲ್ಲ. ಪ್ರಾಮಾಣಿಕರೆ ದುಡ್ಡು ಕೊಟ್ಟು ಪ್ರಶಸ್ತಿಗಳನ್ನು ಕೊಂಡುಕೊಳ್ಳುವ ಪರಸ್ಥಿತಿ ಬಂದಿದೆ. ಅವುಗಳು ಕೂಡ ಸರಕುಗಳಂತೆ ಮಾರಾಟ ಆಗುತ್ತಿರುವುದು ವಿಪರ್ಯಾಸ’ ಎಂದು ಸಾಹಿತಿ ಡಾ.ವಿ.ಎಸ್. ಮಾಳಿ ಹೇಳಿದರು.
ಸಮೀಪದ ಸಂಕೋನಟ್ಟಿ-ಚಿಕ್ಕಟ್ಟಿ ರಸ್ತೆಯಲ್ಲಿರುವ ನಂದೀಶ ತಪೋವನದಲ್ಲಿ ಭಾನುವಾರ ನಿವೃತ್ತ ಶಿಕ್ಷಕ ನಂದೆಪ್ಪ ಪರಪ್ಪ ಟೋಪಗಿ ಅವರ ದ್ವಿತೀಯ ಪುಣ್ಯಸ್ಮರಣೆ ಹಾಗೂ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದಿಂದ ‘ಸಾಹಿತ್ಯಶ್ರೀ’ ಪ್ರಶಸ್ತಿ ದೊರೆತಿದ್ದಕ್ಕೆ ಸತ್ಕಾರ ಸ್ವೀಕರಿಸಿ ಅವರು ಮಾತನಾಡಿದರು.
‘ಇಂದಿನ ದಿನಗಳಲ್ಲಿ ಅಪಮೌಲ್ಯಗಳು ಮೌಲ್ಯಗಳಾಗುತ್ತಿವೆ. ಪ್ರತಿಯೊಬ್ಬರೂ ನಾಟಕದ ಪಾತ್ರಧಾರಿಗಳಂತೆ ಕಾರ್ಯನಿರ್ವಹಿಸುವ ಪರಿಸ್ಥಿತಿ ಬಂದಿದೆ’ ಎಂದು ವಿಷಾದಿಸಿದರು. ‘ಭ್ರಷ್ಟಾಚಾರವಿಲ್ಲದ ಸಮಾಜ ನಿರ್ಮಾಣವಾಗಬೇಕು’ ಎಂದು ಆಶಯ ವ್ಯಕ್ತಪಡಿಸಿದರು.
ನಂದಗಾಂವ ಭೂಕೈಲಾಸ ಮಂದಿರದ ಮಹಾದೇವ ಮಹಾರಾಜ, ‘ಲಿಂ.ನಂದೆಪ್ಪ ಟೋಪಗಿ ವೃತ್ತಿಯಿಂದ ಶಿಕ್ಷಕರಾಗಿದ್ದರೂ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿ ಹಲವರಿಗೆ ನೆರವಾಗಿದ್ದರು’ ಎಂದು ಸ್ಮರಿಸಿದರು.
ತಹಶೀಲ್ದಾರ್ ಹುದ್ದೆಗೆ ಆಯ್ಕೆಯಾದ ಸುರೇಶ ಮುಂಜೆ ಅವರನ್ನು ಗೌರವಿಸಲಾಯಿತು.
ಯಕ್ಕಂಚಿಯ ಗರುದೇವ ತಪೋವನದ ಗೋಪಾಲ ಮಹಾರಾಜ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕ ಎನ್.ಜಿ. ಪಾಟೀಲ ಇದ್ದರು.
ಶ್ರೀಲೇಖಾ ಟೋಪಗಿ ಪ್ರಾರ್ಥಿಸಿದರು. ಬಿ.ಜಿ. ಪಾಟೀಲ ಸ್ವಾಗತಿಸಿದರು. ವಿಜಯ ಹುದ್ದಾರ ನಿರೂಪಿಸಿದರು. ವಕೀಲ ಸುಭಾಸ ನಾಯಿಕ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.