ಬೆಳಗಾವಿ: ‘ಬೆಳಗಾವಿ ಅರಣ್ಯ ವಿಭಾಗದಲ್ಲಿ ಆನೆಗಳ ಸಂರಕ್ಷಣೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ ಆರ್. ಪಾಟೀಲ ತಿಳಿಸಿದ್ದಾರೆ.
‘ಅವುಗಳ ಸಹಜ ಜೀವನಕ್ಕೆ ಪೂರಕ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲು ಅಧಿಕಾರಿ ಮತ್ತು ಸಿಬ್ಬಂದಿಗೆ ನಿರ್ದೇಶನ ನೀಡಲಾಗಿದೆ. ಆನೆಗಳ ಮತ್ತು ಇತರ ವನ್ಯಜೀವಿಗಳ ಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ಷ್ಮ ಮತ್ತು ಆಯಕಟ್ಟಿನ ಅರಣ್ಯ ಪ್ರದೇಶಗಳನ್ನು ಗುರುತಿಸಿ 28 ಕಳ್ಳ ಬೇಟೆ ತಡೆ ಶಿಬಿರಗಳನ್ನು ನಿರ್ಮಿಸಲಾಗಿದೆ. ಅಲ್ಲಿಗೆ ಕಾವಲುಗಾರರನ್ನು ನೇಮಿಸಿ ದಿನದ 24 ಗಂಟೆಯೂ ಗಸ್ತು ತಿರುಗಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
‘ಅರಣ್ಯದಲ್ಲಿ ರೈಲು ಮಾರ್ಗಗಳು ಇರುವೆಡೆ, ರಾತ್ರಿ ಸಮಯದಲ್ಲಿ ರೈಲುಗಳ ವೇಗ ಮಿತಿ ಕಡ್ಡಾಯವಾಗಿ ಕಡಿಮೆಗೊಳಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದವರಿಗೆ ಸೂಚಿಸಲಾಗಿದೆ. ಜೋಡಿ ಮಾರ್ಗ ನಿರ್ಮಾಣ ಹಾಗೂ ಬೆಳಗಾವಿ–ಗೋವಾ ಎನ್.ಎಚ್-4ಎ ವಿಸ್ತರಣೆ ಕೆಲಸ ಕೂಡ ನಡೆಯುತ್ತಿದೆ. ಆ ಪ್ರದೇಶಗಳಲ್ಲಿ ಆನೆ ಹಾಗೂ ಇತರ ವನ್ಯಜೀವಿಗಳ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಲು ಕಡ್ಡಾಯವಾಗಿ ಅಂಡರ್ ಪಾಸ್ಗಳನ್ನು ನಿರ್ಮಿಸಲು ನಿರ್ದೇಶನ ನೀಡಲಾಗಿದೆ. ರೈಲ್ವೆ ಹಳಿ ದಾಟದಂತೆ ಬಳಸಿದ ಹಳಿಗಳ ಬ್ಯಾರಿಕೇಡ್ಗಳಿಂದ ತಡೆಗೋಡೆ ನಿರ್ಮಿಸಲಾಗುವುದು. ಅರಣ್ಯದಂಚಿನಲ್ಲಿ ವಾಸಿಸುವ ಜನರಿಗೆ ಆನೆಗಳ ಬಗ್ಗೆ ತಿಳಿಸಲಾಗುತ್ತಿದೆ’ ಎಂದಿದ್ದಾರೆ.
‘ವನ್ಯ ಪ್ರಾಣಿಗಳಿಂದ ರೈತರ ಬೆಳೆ ಹಾನಿ ಆಗಿದ್ದಲ್ಲಿ ತಕ್ಷಣ ಸಮೀಕ್ಷೆ ನಡೆಸಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಜುಲೈ ಅಂತ್ಯದವರೆಗೆ 368 ವನ್ಯಜೀವಿಗಳಿಂದ ಬೆಳೆ ಹಾನಿ ಪ್ರಕರಣಗಳು ದಾಖಲಾಗಿದ್ದು, ₹ 20 ಲಕ್ಷ ಬೆಳೆ ಪರಿಹಾರ ಪಾವತಿಸಲಾಗಿದೆ’ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.