ADVERTISEMENT

ಚನ್ನಮ್ಮ ಸಮಾಧಿ ಉದ್ಘಾಟನೆ ವಿವಾದ: ಮಾ.9ರಂದು ಬೈಲಹೊಂಗಲ ಬಂದ್

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 7:31 IST
Last Updated 2 ಮಾರ್ಚ್ 2026, 7:31 IST
ಡಾ.ವಿಶ್ವನಾಥ ಪಾಟೀಲ
ಡಾ.ವಿಶ್ವನಾಥ ಪಾಟೀಲ   

ಬೈಲಹೊಂಗಲ: 'ವೀರರಾಣಿ ಕಿತ್ತೂರು ಚನ್ನಮ್ಮ ನವಿಕೃತ ಸಮಾಧಿ ಸ್ಥಳ ಹಾಗೂ ಉದ್ಯಾನವನ್ನು ಯಾರಿಗೂ ತಿಳಿಸದೆ ತರಾತುರಿಯಲ್ಲಿ ಉದ್ಘಾಟನೆ ಮಾಡಿರುವ ಶಾಸಕ ಮಹಾಂತೇಶ ಕೌಜಲಗಿ ಅವರ ನಡೆ ಖಂಡಿಸಿ ವಿವಿಧ ಕನ್ನಡಪರ ಸಂಘಟನೆ, ರೈತ ಸಂಘಟನೆಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ನಾಡಿನ ಹಿರಿಯರು, ಮುಖಂಡರ ನೇತೃತ್ವದಲ್ಲಿ ಮಾ.9ರಂದು ಬೈಲಹೊಂಗಲ ಸಂಪೂರ್ಣ ಬಂದ್ ಕರೆ ನೀಡಲಾಗಿದೆ' ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.

ನಗರದ ವಿದ್ಯಾನಗರದ ಅವರ ಗೃಹ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.

'ಚನ್ನಮ್ಮ ಸಮಾಧಿ ಸ್ಥಳ ಅಭಿವೃದ್ಧಿಗೆ ಸರ್ಕಾರದಿಂದ ₹5 ಕೋಟಿ ಅನುದಾನ ಒದಗಿಸಲಾಗಿದೆ. ಆದರೆ ಅದರಲ್ಲಿ ಒಂದು ಕೋಟಿಯೂ ಖರ್ಚು ಮಾಡಿಲ್ಲ. ದುಡ್ಡು ಹೊಡೆದ ವಿಷಯ ಜನರಿಗೆ ಗೊತ್ತಾಗಬಾರದು ಎಂಬ ದುರುದ್ದೇಶದಿಂದ 50 ಹಾಸಿಗೆಗಳ ತೀವ್ರ ನಿಗಾ ಘಟಕ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ ಸಮಾರಂಭಕ್ಕೆ ಆಗಮಿಸಿದ್ದ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರಿಂದ ನವೀಕೃತ ಚನ್ನಮ್ಮನ ಸಮಾಧಿ ಸ್ಥಳ, ಉದ್ಯಾನ ಉದ್ಘಾಟನೆ ಮಾಡಿಸಿದ್ದಾರೆ.

ADVERTISEMENT

ಸರ್ಕಾರಿ ನಿಯಮಾನುಸಾರ ಆಮಂತ್ರಣ ಪತ್ರಿಕೆ ಮುದ್ರಣ ಮಾಡಿಲ್ಲ. ಭವ್ಯ ವೇದಿಕೆ ಹಾಕಿಲ್ಲ. ನಂದಗಡದಲ್ಲಿ ಹೇಗೆ ಸಿಎಂ ಸಿದ್ಧರಾಮಯ್ಯ ಅವರಿಂದ ರಾಯಣ್ಣ ಮ್ಯೂಸಿಯಂ ಅದ್ಧೂರಿಯಾಗಿ ಉದ್ಘಾಟನೆ ಮಾಡಿದರೂ, ಅದೇ ಮಾದರಿಯಲ್ಲಿ ಚನ್ನಮ್ಮನ ಸಮಾಧಿ ಸ್ಥಳದಲ್ಲಿ ಭವ್ಯ ರಾಕ್ ಗಾರ್ಡನ್ ನಿರ್ಮಿಸಿ ಸಮಾಜದ ಜನತೆ, ಪೂಜ್ಯರನ್ನು ಆಹ್ವಾನಿಸಿ ಅದ್ದೂರಿ ಕಾರ್ಯಕ್ರಮ ನಡೆಸಿ ಉದ್ಘಾಟನೆ ಮಾಡಬೇಕಿತ್ತು. ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಚನ್ನಮ್ಮನ ಸೈನಿಕ ಶಾಲೆ ನಿರ್ಮಾಣಕ್ಕೆ ₹ 200 ಕೋಟಿ ಮೀಸಲು ಇಡಬೇಕು. ಶೀಘ್ರ ಚನ್ನಮ್ಮನ ರಾಕ್ ಗಾರ್ಡನ್ ಉದ್ಘಾಟನಾ ಸಮಾರಂಭ ಏರ್ಪಡಿಸಬೇಕು. ಇಲ್ಲದಿದ್ದರೆ ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು' ಎಂದು ಎಚ್ವರಿಸಿದರು.

'ನಗರದ ಮಿನಿವಿಧಾನಸೌಧ ಎದುರು ಇರುವ ಬಸವ ಉದ್ಯಾನದಲ್ಲಿ ಬಸವಣ್ಣನವರ ಕಂಚಿನ ಆಶ್ವಾರೂಢ ಮೂರ್ತಿ ಪ್ರತಿಷ್ಠಾಪಿಸಬೇಕು. ಇಲ್ಲದಿದ್ದರೆ ಅದಕ್ಕೊಮ್ಮೆ ಉಗ್ರ ಹೋರಾಟ ನಡೆಸಲಾಗುವುದು' ಎಂದು ಎಚ್ಚರಿಕೆ ನೀಡಿದರು.

ಸಮಾಜ ಸೇವಕ ರಫೀಕ್ ಬಡೇಘರ ಮಾತನಾಡಿದರು. ಶ್ರೀಶೈಲ ಯಡಳ್ಳಿ, ಮಡಿವಾಳಪ್ಪ ಹೋಟಿ, ಬಾಳನಗೌಡ ಪಾಟೀಲ, ರಿತೇಶ ಪಾಟೀಲ, ವಿಶಾಲ ಬೋಗೂರ, ಮಡಿವಾಳಪ್ಪ ಚಿಕ್ಕೊಪ್ಪ, ಬಸವರಾಜ ನೇಸರಗಿ ಹಾಗೂ ಅನೇಕರು ಇದ್ದರು.

ಬಸ್ ಬಂದ್‌ ಇಲ್ಲ: 

ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ಬಸ್‌ಗಳು ಬಂದ್ ಇರಲ್ಲ. ಅಂಗಡಿ ಮುಂಗಟ್ಟುಗಳು, ಸರ್ಕಾರಿ ಕಚೇರಿಗಳು, ಸಂಘಸಂಸ್ಥೆಗಳು ಸಂಪೂರ್ಣ ಬಂದ್ ಆಗಲಿದ್ದು, ನಾಡಿನ ಸರ್ವಜನಾಂಗದ ನಾಗರಿಕರು, ಚನ್ನಮ್ಮ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬೈಲಹೊಂಗಲ ಬಂದ್‌ನಲ್ಲಿ ಭಾಗವಹಿಸಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.