
ಬೈಲಹೊಂಗಲ: ತಾಲ್ಲೂಕಿನ ಮಲ್ಲಮ್ಮನ ಬೆಳವಡಿ, ಉಡಿಕೇರಿ, ಮೂಗಬಸವ, ಗುಡಿಕಟ್ಟಿ, ಬುಡರಕಟ್ಟಿ, ಲಿಂಗದಳ್ಳಿ, ಬೂದಿಹಾಳ, ಏಣಗಿ ಮತ್ತಿತರ ಗ್ರಾಮಗಳ ರೈತರ ಜಮೀನುಗಳ ಪಂಪ್ಸೆಟ್ಗಳಿಗೆ ಮಲ್ಲಮ್ಮನ ಬೆಳವಡಿ ವಿದ್ಯುತ್ ಉಪ ನಿಯಂತ್ರಣ ಶಾಖಾ ಕಚೇರಿ ಅಧಿಕಾರಿಗಳು ಸರ್ಕಾರದ ನಿಯಮಗಳ ಪ್ರಕಾರ ನಿರಂತರ ವಿದ್ಯುತ್ ಪೂರೈಕೆ ಮಾಡದೇ ರೈತರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಲ್ಲಮ್ಮನ ಬೆಳವಡಿ ಹಾಗೂ ಸುತ್ತಲಿನ ಗ್ರಾಮಗಳ ರೈತರು ಬೆಳವಡಿ ರಾಣಿ ಮಲ್ಲಮ್ಮ ವೃತ್ತದಲ್ಲಿರುವ ಹೆಸ್ಕಾಂ ಉಪ ನಿಯಂತ್ರಣ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕುವ ಮೊದಲು ರಾಣಿ ಮಲ್ಲಮ್ಮ ವೃತ್ತದ ಬಳಿ ಕೆಲ ಕಾಲ ರಸ್ತೆ ತಡೆ ನಡೆಸಿ ಸರ್ಕಾರ ಮತ್ತು ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ, ರೈತ ಮುಖಂಡರಾದ ಮಹಾಂತೇಶ ಕಮತ, ಸಚಿನ ಪಟಾತ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.
ರೈತರ ಹೊಲಗಳ ಪಂಪ್ಸೆಟ್ಗಳಿಗೆ ಶೀಘ್ರ ನಿಯಮದಂತೆ ನಿರಂತರ ವಿದ್ಯುತ್ ಪೂರೈಸಬೇಕು. ಅನುಮತಿ ಇಲ್ಲದ ಅನಧಿಕೃತ ಬೋರವೆಲ್ಗಳನ್ನು ಮನ್ಸೂಚನೆ ಇಲ್ಲದೇ ಸಂಪರ್ಕ ಕಡಿತಗೊಳಿಸುವುದನ್ನು ನಿಲ್ಲಿಸಬೇಕು. ಹೀಗೆ ಮುಂದುವರಿದರೆ ಹೆಸ್ಕಾಂ ಬೈಲಹೊಂಗಲ ಕಚೇರಿ ಎದುರು ಸಾವಿರಾರು ರೈತರೊಂದಿಗೆ ಧರಣಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರೈತರಾದ ನಿಂಗಪ್ಪ ಚೌಡಣ್ಣವರ, ಸುಭಾಷ್ ಬಾಗೇವಾಡಿ, ಫಕ್ಕೀರ ಕಡಕೋಳ, ವಿರೇಶ ಗುಡ್ಡದಮಠ, ವೀರೇಶ ಕರೀಕಟ್ಟಿ, ಸಚಿನ ಪಟಾತ, ಶಂಕರ ತರಗಾರ, ಆನಂದ ಪಟಾತ, ಮಾಳೇಶ ತಳವಾರ, ರಾಜು ಹೊಸೆಟ್ಟಿ, ಶ್ರೀಶೈಲ ಪೂಜೇರ, ವಿಠ್ಠಲ ತರಗಾರ, ಕಲ್ಲಪ್ಪ ಜೀರಗವಾಡ, ಕಲ್ಲಪ್ಪ ಪೂಜೇರ, ಶಿವಪ್ಪ ಕುರಿ ಸೇರಿದಂತೆ ಮಲ್ಲಮ್ಮನ ಬೆಳವಡಿ ಸುತ್ತಲಿನ ವಿವಿಧ ಗ್ರಾಮಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.