ADVERTISEMENT

ಬೈಲಹೊಂಗಲ | ಕವಿಗಳು ಬದಲಾವಣೆಯ ಹರಿಕಾರರಾಗಿ: ಶಂಕರ ಬೋಳನ್ನವರ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 3:07 IST
Last Updated 24 ನವೆಂಬರ್ 2025, 3:07 IST
ಬೈಲಹೊಂಗಲ ಗಣಾಚಾರಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸಮಾರಂಭವನ್ನು ರೈತ ಶಂಕರ ಬೋಳನ್ನವರ ಉದ್ಘಾಟಿಸಿದರು
ಬೈಲಹೊಂಗಲ ಗಣಾಚಾರಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸಮಾರಂಭವನ್ನು ರೈತ ಶಂಕರ ಬೋಳನ್ನವರ ಉದ್ಘಾಟಿಸಿದರು   

ಬೈಲಹೊಂಗಲ: ‘ಸಾಹಿತ್ಯವು ನಾಡು ಬೆಳಗುವ ಅಮೂಲ್ಯ ಕ್ಷೇತ್ರವಾಗಿದೆ. ಯುವ ಕವಿಗಳು ತಮ್ಮ ಕವನಗಳ ಮೂಲಕ ಸಮಾಜದ ಕಣ್ಣು ತೆರೆಸಬೇಕು. ಸಾಮಾಜಿಕ ಬದಲಾವಣೆಯ ಹರಿಕಾರರಾಗಬೇಕು’ ಎಂದು ನೇಗಿಲಯೋಗಿ ರೈತ ಪರಿಶ್ರಮ ಸೇವಾ ಸಂಘ ಅಧ್ಯಕ್ಷ ಶಂಕರ ಬೋಳನ್ನವರ ಹೇಳಿದರು.

ಪಟ್ಟಣದ ಗಣಾಚಾರಿ ಶಿಕ್ಷಣ ಸಂಸ್ಥೆಯಲ್ಲಿ ಬೆಂಗಳೂರಿನ ಬಸವ ಸಮಿತಿ  ವತಿಯಿಂದ ಭಾನುವಾರ ನಡೆದ ಕರ್ನಾಟಕ ರಾಜ್ಯೋತ್ಸವ ಸಂಭ್ರಮ, ರಾಜ್ಯಮಟ್ಟದ ಕವಿಗೋಷ್ಠಿ ಉದ್ಘಾಟಿಸಿ  ಮಾತನಾಡಿದರು.

‘ಕನ್ನಡವನ್ನು ಉಳಿಸಿ, ಬೆಳೆಸಬೇಕಾದುದು ಕನ್ನಡಿಗರ ಕರ್ತವ್ಯ. ಪಾಲಕರು ತಮ್ಮ ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಬೇಕು. ಓದುವಿಕೆ ಮತ್ತು ಬರೆಯುವಿಕೆಯ ಅನುಭವ ಹೆಚ್ಚಿಸುವ ಸಾಹಿತ್ಯದತ್ತ ಎಲ್ಲರೂ ಆಸಕ್ತಿ ಬೆಳೆಸಿಕೊಳ್ಳಬೇಕು’ ಎಂದರು.

ADVERTISEMENT

ಮೋಹನ ಪಾಟೀಲ ಮಾತನಾಡಿ, ‘ಯುವ ಕವಿಗಳು, ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆದು ಸಮಾಜ ಕಟ್ಟಬೇಕು. ಇಂಗ್ಲಿಷ್ ಮಾಧ್ಯಮದತ್ತ ಸಾಗುತ್ತಿರುವ ಯುವ ಪೀಳಿಗೆಯನ್ನು ಕನ್ನಡದತ್ತ ಸೆಳೆಯಲು ಸಾಹಿತ್ಯ ಕಾರ್ಯಕ್ರಮಗಳು ಸಹಕಾರಿ’ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಕಾರ್ಯದರ್ಶಿ ರವಿಕುಮಾರ ಹುಲಕುಂದ, ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ ಕಾಶಿಮ ಜಮಾಧಾರ ಅವರನ್ನು ಸನ್ಮಾನಿಸಲಾಯಿತು.

ಪ್ರೊ. ಸಿ.ಬಿ.ಗಣಾಚಾರಿ, ಇಮ್ರಾಹಿಮ್ ಮುಲ್ಲಾ, ಪರಿಷತ್ ಉಪಾಧ್ಯಕ್ಷ ಶ್ರೀಶೈಲ ಶರಣಪ್ಪನವರ, ಮೋಹನ ಪಾಟೀಲ, ಬಾಳೇಶ ಫಕೀರಪ್ಪನವರ, ಶಿವಾನಂದ ಪಟ್ಟಿಹಾಳ ಇದ್ದರು.

‘ಮಕ್ಕಳಿಗೆ ಸಾಹಿತ್ಯಾಸಕ್ತಿ ಮೂಡಿಸಿ’
‘ಹಾಡು ಕವಿತೆ ಹೇಳಿಕೊಡುವ ಮೂಲಕ ಮಕ್ಕಳಿಗೆ ಸಾಹಿತ್ಯದ ಪರಿಚಯ ಹಾಗೂ ಆಸಕ್ತಿ ಮೂಡಿಸಬೇಕು. ಸಾಹಿತ್ಯಕ್ಕೆ ಧರ್ಮ ಜಾತಿ ಎಂಬ ತಾರತಮ್ಯವಿಲ್ಲ. ಕವಿ ಲೇಖಕರೆಲ್ಲರೂ ಒಂದೇ. ಇದೇ ಮನೋಭಾವದಿಂದ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡರೆ ಸಮಾಜ ಸದೃಢವಾಗಿರುತ್ತದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಆರ್. ಠಕ್ಕಾಯಿ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.