ಬೆಳಗಾವಿ: ‘ಪ್ರಗತಿಶೀಲ ಸಾಹಿತ್ಯ ಚಳವಳಿಯ ಪ್ರತಿಪಾದಕರಲ್ಲಿ ಅಗ್ರಸ್ಥಾನದಲ್ಲಿದ್ದ ಬಸವರಾಜ ಕಟ್ಟೀಮನಿ ಅವರು, ದುಡಿಯುವ ಜನರ ಪರವಾಗಿ ಕತೆ, ಕಾದಂಬರಿಗಳನ್ನು ರಚಿಸಿ ಜನರ ಸಾಹಿತಿ ಎಂದು ಖ್ಯಾತಿ ಗಳಿಸಿದ್ದರು’ ಎಂದು ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಯಲ್ಲಪ್ಪ ಹಿಮ್ಮಡಿ ಹೇಳಿದರು.
ಇಲ್ಲಿನ ಕೆಎಲ್ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗ ಹಾಗೂ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ‘ಬಸವರಾಜ ಕಟ್ಟೀಮನಿ ಅವರ ಸಾಹಿತ್ಯದಲ್ಲಿ ಪ್ರಗತಿಶೀಲತೆ’ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಚ್.ಎಸ್.ಮೇಲಿನಮನಿ, ‘ಬೀದಿಗೆ ಬಂದವರು, ಗಿರಣಿ ಕಾರ್ಮಿಕರು, ಕೂಲಿಕಾರರು, ಮಹಿಳೆಯರು ಮತ್ತು ಪರಿಶಿಷ್ಟರ ಪರವಾಗಿ ಅತಿಹೆಚ್ಚು ಕತೆ, ಕಾದಂಬರಿ ಬರೆದವರಲ್ಲಿ ಬಸವರಾಜ ಕಟ್ಟೀಮನಿ ಮೊದಲಿಗರಾಗಿದ್ದರು. ಬರೆದಂತೆ ಬದುಕಿದ ಬದ್ಧತೆಯ ಸಾಹಿತಿ ಅವರಾಗಿದ್ದರು’ ಎಂದು ಸ್ಮರಿಸಿದರು. ಪ್ರಾಧ್ಯಾಪಕಿ ಸರಸ್ವತಿ ಭಗವತಿ ಅವರು ಪ್ರಬಂಧ ಮಂಡಿಸಿದರು.
ಸೋಮನಾಥ ಚಿಕ್ಕನರಗುಂದ, ಪಿ.ಜಿ.ಕೆಂಪಣ್ಣವರ, ಆಶಾ ಯಮಕನಮರಡಿ, ಮಹೇಶ ಗುರನಗೌಡರ, ಶಶಿಕಾಂತ ತಾರದಾಳೆ, ಅಡಿವೆಪ್ಪ ಇಟಗಿ, ಸಂತೋಷ ಚವ್ಹಾಣ, ರೋಹಿಣಿ ಹಣಬರಟ್ಟಿ, ಸ್ವಾತಿ ಮಾಳಿಗೆ, ವರ್ಷಾ ಮುರಗೋಡ, ಜಾನ್ವಿ ಬೆಳ್ಳೆ, ಸೃಷ್ಟಿ ಕೊರೆನ್ನವರ ಇದ್ದರು. ಪ್ರತಿಷ್ಠಾನದ ಸದಸ್ಯೆ ಕೆ.ಆರ್.ಸಿದ್ದಗಂಗಮ್ಮ ಆಶಯ ನುಡಿಗಳನ್ನಾಡಿದರು. ಎಚ್.ಎಂ.ಚನ್ನಪ್ಪಗೋಳ ಸ್ವಾಗತಿಸಿದರು. ಪಾಂಡುರಂಗ ಗಾಣಿಗೇರ ವಂದಿಸಿದರು. ನಾಗವೇಣಿ ದೂದ್ಯಾಗೋಳ ಮತ್ತು ತ್ರಿವೇಣಿ ಪೂಜೇರ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.