ಬೆಳಗಾವಿ: ಕ್ರಿಸ್ಮಸ್ ಆಚರಣೆಗೆ ಜಿಲ್ಲೆಯ ಚರ್ಚ್ಗಳು ಹಾಗೂ ಕ್ರೈಸ್ತರ ಮನೆಗಳಲ್ಲಿ ಸಿದ್ಧತೆ ನಡೆದಿದೆ.
ಡಿ. 25ರಂದು ಹಬ್ಬದ ಆಚರಣೆ ನಡೆಯಲಿದೆ. ಮಂಗಳವಾರ (ಡಿ.24) ರಾತ್ರಿಯಿಂದಲೇ ಚರ್ಚ್ಗಳಲ್ಲಿ ವಿಶೇಷ ಕಾರ್ಯಕ್ರಮಗಳು ಆರಂಭಗೊಳ್ಳಿವೆ. ಮಧ್ಯರಾತ್ರಿಯೇ ವಿಶೇಷ ಸಾಮೂಹಿಕ ಪ್ರಾರ್ಥನೆ ನೆರವೇರಲಿದೆ. ಬಿಷಪ್ ಅವರಿಂದ ಸಂದೇಶವಿರುತ್ತದೆ. ಹಬ್ಬದ ಹಿನ್ನೆಲೆಯಲ್ಲಿ ಚರ್ಚ್ಗಳು ವಿದ್ಯುತ್ ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿವೆ ಹಾಗೂ ಯೇಸು ಕ್ರಿಸ್ತನ ಜನನದ ಸನ್ನಿವೇಶವನ್ನು ಬಿಂಬಿಸುವ ‘ಗೋದಲಿ’ಗಳು (ಕ್ರಿಬ್) ಮಾದರಿಗಳು ಗಮನಸೆಳೆಯುತ್ತಿವೆ.
‘ಸರಳತೆ, ಮೌಲ್ಯ, ಪ್ರಾರ್ಥನೆ, ಸಹೋದರತ್ವ, ಪರೋಪಕಾರದ ಮಹತ್ವ ಸಾರುವ ಮತ್ತು ಶಾಂತಿಯ ಸಂದೇಶದ ನಕ್ಷತ್ರವು ಪ್ರತಿಯೊಬ್ಬರ ಮನದಲ್ಲೂ ಮಿನುಗಲಿ’ ಎಂಬ ಆಶಯದ ಈ ಹಬ್ಬದ ಆಚರಣೆಗೆ ಗಡಿನಾಡು ಬೆಳಗಾವಿಯಲ್ಲಿ ವಿಶೇಷ ಮಹತ್ವವಿದೆ. ಇಲ್ಲಿನ ಬಹುತೇಕ ಚರ್ಚ್ಗಳು ಪಾರಂಪರಿಕ ಕಟ್ಟಡಗಳು ಎನಿಸಿಕೊಂಡಿರುವುದು ಇದಕ್ಕೆ ಕಾರಣ. ಹೀಗಾಗಿ, ಇಲ್ಲಿಗೆ ಪಕ್ಕದ ಗೋವಾದಿಂದಲೂ ತಮ್ಮ ನೆಂಟರಿಷ್ಟರ ಮನೆಗಳಿಗೆ ಬಂದು ಕ್ರಿಸ್ಮಸ್ ಸಂಭ್ರಮದಲ್ಲಿ ಭಾಗಿಯಾಗುತ್ತಾರೆ.
ವಿಶೇಷ ಮೆರುಗು:
ನಗರದ ವಿವಿಧೆಡೆ ಹಾಗೂ ಕೆಲವು ಗ್ರಾಮೀಣ ಪ್ರದೇಶಗಳಲ್ಲಿರುವ ಚರ್ಚ್ಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿವೆ. ನಕ್ಷತ್ರಬುಟ್ಟಿಗಳು ಅವುಗಳಿಗೆ ಮೆರುಗು ನೀಡುತ್ತಿವೆ. ವಿಶೇಷವಾಗಿ ಕ್ಯಾಂಪ್ ಪ್ರದೇಶದಲ್ಲಿರುವ ಚರ್ಚ್ಗಳು ಹಾಗೂ ಕ್ರೈಸ್ತರ ಮನೆಗಳ ಆವರಣದಲ್ಲಿ ನಕ್ಷತ್ರಬುಟ್ಟಿಗಳು ಬೆಳಗುತ್ತಿವೆ; ಸಂಭ್ರಮವನ್ನು ಹರಡುತ್ತಿವೆ.
ಜಿಲ್ಲೆಯಲ್ಲಿ ರೋಮನ್ ಕ್ಯಾಥೋಲಿಕ್’ ಮತ್ತು ‘ಪ್ರೊಟೆಸ್ಟೆಂಟ್’ ಕ್ರೈಸ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ‘ರೋಮನ್ ಕ್ಯಾಥೋಲಿಕ್’ ಪಂಗಡಕ್ಕೆ ಸೇರಿದವರು ಸಂಪ್ರದಾಯಗಳನ್ನು ಪಾಲಿಸುತ್ತಾರೆ. ಪೋಪ್ ಧರ್ಮಗುರುವನ್ನು ನಂಬುತ್ತಾರೆ. ನಗರ ಹಾಗೂ ತಾಲ್ಲೂಕಿನಲ್ಲಿ 20ಕ್ಕೂ ಹೆಚ್ಚು ಹಾಗೂ ಜಿಲ್ಲೆಯಾದ್ಯಂತ 100ಕ್ಕೂ ಹೆಚ್ಚು ಚರ್ಚ್ಗಳಿವೆ. ಅವುಗಳಲ್ಲೀಗ ಕ್ರಿಸ್ಮಸ್ ಸಂಭ್ರಮ ಮನೆ ಮಾಡಿದೆ.
ಸಂತೋಷ ಕೂಟ:
ಕ್ರಿಸ್ಮಸ್ ಅಂಗವಾಗಿ ವಿಶೇಷ ಪ್ರಾರ್ಥನೆಗೆ ಸಿದ್ಧತೆ ನಡೆದಿದೆ. ಕ್ರೈಸ್ತರು ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಯಾಂಪ್ ಪ್ರದೇಶದಲ್ಲಿ ಸಂಭ್ರಮ ಇಮ್ಮಡಿಯಾಗಿದೆ. ಫಾತಿಮಾ ಕೆಥಿಡ್ರಲ್ ಚರ್ಚ್, ಐ.ಸಿ. ಚರ್ಚ್, ಸೇಂಟ್ ಅಂಥೋನಿ ಚರ್ಚ್, ಮೌಂಟ್ಕಾರ್ಮಲ್ ಚರ್ಚ್, ಸೇಂಟ್ ಮೇರಿ ಚರ್ಚ್, ಮೆಥೋಡಿಸ್ಟ್ ಚರ್ಚ್, ಬಾಕ್ಸೈಟ್ ರಸ್ತೆಯಲ್ಲಿರುವುದು ಸೇರಿದಂತೆ ಚರ್ಚ್ಗಳಲ್ಲಿ ಸಿದ್ಧತೆ ನಡೆದಿದೆ. ಮಂಗಳವಾರ ಮಧ್ಯರಾತ್ರಿಯಿಂದಲೇ ವಿಶೇಷ ಪ್ರಾರ್ಥನೆ ಮೂಲಕ ಕ್ರಿಸ್ಮಸ್ ಕಳೆಗಟ್ಟಲಿದೆ. ವಿಶೇಷ ಪ್ರಾರ್ಥನೆ ಬಳಿಕ ಕ್ರೈಸ್ತರು ಸಿಹಿ ತಿನಿಸುಗಳನ್ನು ಹಂಚಿಕೊಳ್ಳುತ್ತಾರೆ. ಬುಧವಾರ ಬೆಳಗಿನ ಜಾವದವರೆಗೂ ನಡೆಯುವ ‘ಸಂತೋಷ ಕೂಟ’ದ ವಿಶೇಷ ಗೀತಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.
ಮನೆಗಳಲ್ಲಿ ಕ್ರೈಸ್ತರು ಕೇಕ್ಗಳು ಮೊದಲಾದ ತಿನಿಸುಗಳನ್ನು ಸಿದ್ಧಪಡಿಸುವುದು ವಿಶೇಷ. ಹೊಸ ಬಟ್ಟೆ ತೊಟ್ಟು, ಪ್ರಾರ್ಥನೆ ಸಲ್ಲಿಸಿ ಪಕ್ಕದ ಮನೆಯವರು, ನೆಂಟರಿಷ್ಟರು, ಸ್ನೇಹಿತರಿಗೆ ಕೇಕ್ ಹಂಚಿ ಸಂಭ್ರಮಿಸುತ್ತಾರೆ. ಹೀಗಾಗಿ, ಬೇಕರಿಗಳಲ್ಲಿ ಕೇಕ್ಗಳಿಗೆ ಬೇಡಿಕೆ ಕಂಡುಬಂತು.
ಚರ್ಚ್ನಿಂದ ನಿಯೋಜಿತರಾದ ಯುವಕರ ತಂಡದವರು ಕ್ರೈಸ್ತರ ಮನೆಗಳಿಗೆ ತೆರಳಿ, ಶುಭಾಶಯ ಗೀತೆ ಹಾಡುವ ಮೂಲಕ ಹಬ್ಬದ ಶುಭಾಶಯ ಕೋರುವುದೂ ನಡೆಯುತ್ತದೆ. ಹಬ್ಬದಂದು, ಉಳ್ಳವರು ಬಡವರಿಗೆ ಅಕ್ಕಿ, ಬೇಳೆ, ಸಕ್ಕರೆ, ಸೀರೆ ವಿತರಿಸುತ್ತಾರೆ. ಕೇಕ್ ನೀಡಿ ಸಂಭ್ರಮ ಹಂಚಿಕೊಳ್ಳುತ್ತಾರೆ. ಬುಧವಾರದ ವಿಶೇಷ ಪೂಜೆ- ಸಾಮೂಹಿಕ ಪ್ರಾರ್ಥನೆಯಲ್ಲಿ ಇತರ ಧರ್ಮೀಯರೂ ಭಾಗವಹಿಸುವುದು ವಿಶೇಷ.
‘ಕ್ರಿಸ್ಮಸ್ ಹಬ್ಬವು ಪ್ರೀತಿಯನ್ನು ಹಂಚುವುದು ಹಾಗೂ ಬೆಳಕನ್ನು ಪಸರಿಸುವುದೇ ಆಗಿದೆ. ದೇವರ ಆಗಮನದ ಮೂಲಕ ಬೆಳಕು ಹರಡುವ ಸಮಯವಿದು. ಬಡವರಿಗೆ ಕೈಲಾದಷ್ಟು ನೆರವಾಗಿ, ಸಂಕಷ್ಟದಲ್ಲಿರುವವರನ್ನು ಆರೈಕೆ ಮಾಡುವುದರಿಂದ ದೇವರು ಸಂತೋಷಪಡುತ್ತಾನೆ. ತಪ್ಪೊಪ್ಪಿಗೆ ಹಾಗೂ ಕ್ಷಮಿಸುವ ಗುಣ ಬೆಳೆಸಿಕೊಳ್ಳುವ ಮೂಲಕ ಕ್ರಿಸ್ಮಸ್ ಅನ್ನು ಹೆಚ್ಚು ಅರ್ಥಪೂರ್ಣವಾಗಿಸೋಣ’ ಎನ್ನುತ್ತಾರೆ ಬಿಷಪ್ ಡೆರಿಕ್ ಫರ್ನಾಂಡೀಸ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.