
ನಿಪ್ಪಾಣಿ: ಸಹಕಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರ ಕೊಡುಗೆ ಅದ್ಭುತವಾಗಿದೆ. ಜೊಲ್ಲೆ ಅವರು ಸಾಮಾನ್ಯ ಜನರ ಕೆಲಸ ಮಾಡುವ ಮೂಲಕ ಸಾಮ್ರಾಜ್ಯವನ್ನು ನಿರ್ಮಿಸಿದ್ದಾರೆ. ಅವರು ಮುಂಬರುವ ದಿನಗಳಲ್ಲಿ ದೆಹಲಿಯಲ್ಲೂ ತಮ್ಮ ಕೆಲಸದ ಧ್ವಜ ಹಾರಿಸಲಿ' ಎಂದು ಕೊಲ್ಹಾಪುರ ರಾಜ್ಯಸಭಾ ಸದಸ್ಯ ಧನಂಜಯ ಮಹಾಡಿಕ ಹೇಳಿದರು.
ಗುರುವಾರ ಇಲ್ಲಿನ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಕಾರ್ಯಾಲಯದಲ್ಲಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಆಯ್ಕೆಯಾದ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಸನ್ಮಾನಿಸಿ ಅವರು ಮಾತನಾಡಿದರು. 'ಅಣ್ಣಾಸಾಹೇಬ ಜೊಲ್ಲೆ ಅವರು ಬೀರೇಶ್ವರ ಸೊಸೈಟಿಯ 231 ಶಾಖೆಗಳ ಮೂಲಕ ವಿವಿಧ ರಾಜ್ಯಗಳಲ್ಲಿ ಸಹಕಾರವನ್ನು ಹರಡಿಸಿದ್ದಾರೆ. ಸಹಕಾರ ಸೇರಿದಂತೆ ಸಾಮಾಜಿಕ ಕಾರ್ಯಗಳಲ್ಲಿ ಛಾಪು ಮೂಡಿಸಿದ್ದಕ್ಕಾಗಿ ಸಾರ್ವಜನಿಕರು ಅವರನ್ನು ತಮ್ಮ ಹೃದಯದಲ್ಲಿ ಇಟ್ಟುಕೊಂಡಿದ್ದಾರೆ. ಬೀರೇಶ್ವರ ಸೊಸೈಟಿಯ ವಿಸ್ತರಣೆ ಬೆಳಗಾವಿ ಜಿಲ್ಲಾ ಕೇಂದ್ರ ಬ್ಯಾಂಕ್ಗಿಂತ ದೊಡ್ಡದಾಗಿದೆ. ಆದರೂ, ಜೊಲ್ಲೆ ಈಗ ಜಿಲ್ಲಾ ಬ್ಯಾಂಕಿನ ಅಧ್ಯಕ್ಷರಾಗಿರುವುದರಿಂದ, ಜಿಲ್ಲಾ ಬ್ಯಾಂಕ್ ಎರಡು ಪಟ್ಟು ಪ್ರಗತಿ ಸಾಧಿಸಲಿದೆ' ಎಂದರು.
ಹಾತಕಣಗಲೆಯ ಶಾಸಕ ಅಶೋಕರಾವ ಮಾನೆ ಮಾತನಾಡಿ, ಜೊಲ್ಲೆ ದಂಪತಿ ನಿಪ್ಪಾಣಿ ಮತ್ತು ಚಿಕ್ಕೋಡಿ ಪ್ರದೇಶಗಳಲ್ಲಿ ಮಾತ್ರವಲ್ಲದೆ ಕೊಲ್ಲಾಪುರ ಜಿಲ್ಲೆಯಲ್ಲಿಯೂ ಸಂಸ್ಥೆಗಳ ಮೂಲಕ ತಮ್ಮ ಬದ್ಧತೆಯನ್ನು ಉಳಿಸಿಕೊಂಡಿದ್ದಾರೆ. ಅವರು ಅಲ್ಲಿ ನೂರಾರು ಜನರಿಗೆ ಉದ್ಯೋಗ ನೀಡಿದ್ದಾರೆ. ಅವರ ಮಾದರಿ ಅನುಸರಿಸಲು ಯೋಗ್ಯವಾಗಿದೆ' ಎಂದರು.
ಮಾಜಿ ಶಾಸಕ ಅರವಿಂದ್ ಪಾಟೀಲ ಮಾತನಾಡಿ, ಜಿಲ್ಲಾ ಬ್ಯಾಂಕಿನಲ್ಲಿ ಅನೇಕ ಹಿರಿಯ ನಿರ್ದೇಶಕರು ಇದ್ದರೂ, ಬ್ಯಾಂಕಿನ ಪ್ರಗತಿಗಾಗಿ ಜೊಲ್ಲೆ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಎಲ್ಲರೂ ಸರ್ವಾನುಮತದಿಂದ ಆದ್ಯತೆ ನೀಡಿದ್ದಾರೆ' ಎಂದರು. ಶಾಸಕಿ ಶಶಿಕಲಾ ಜೊಲ್ಲೆ, ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಅಣ್ಣಾಸಾಹೇಬ ಜೊಲ್ಲೆ ಅವರು ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು. ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ಕಾರ್ಖಾನೆ ನಿರ್ದೇಶಕ ಸ್ವಾಗತಿಸಿದರು. ನಂತರ, ಗಣ್ಯರು ಮತ್ತು ಸಕ್ಕರೆ ಕಾರ್ಖಾನೆ ನಿರ್ದೇಶಕರ ಪರವಾಗಿ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಸನ್ಮಾನಿಸಲಾಯಿತು,
ಈ ಸಂದರ್ಭದಲ್ಲಿ, ಅಪ್ಪಾಸಾಹೇಬ ಕುಲಗೋಡೆ, ಮಲ್ಲಪ್ಪ ಯಾದವಾಡ, ನೀಲಕಂಠ ಕಪ್ಪಲ್ಗುಡ್ಡಿ, ವಿರೂಪಾಕ್ಷ ಮಹ್ಮನಿ, ಮಾಜಿ ಸಚಿವ ಶಶಿಕಾಂತ ನಾಯಕ, ಹಾಲಶುಗರ್ ಅಧ್ಯಕ್ಷ ಎಂ.ಪಿ. ಪಾಟೀಲ, ಉಪಾಧ್ಯಕ್ಷ ಪವನ ಪಾಟೀಲ, ಬಸವರಾಜ ಕಲ್ಲಟ್ಟಿ, ಶ್ರೀಕಾಂತ ಬನ್ನೆ, ಅಶೋಕ್ ಪಟ್ಟಣಶೆಟ್ಟಿ, ಸುನಿಲ ಪಾಟೀಲ, ರಾಜೇಂದ್ರ ಪಾಟೀಲ ಜೊತೆಗೆ ಹಾಲಸಿದ್ಧನಾಥ ಕಾರ್ಖಾನೆಯ ಎಲ್ಲಾ ನಿರ್ದೇಶಕರು ಮತ್ತು ಗಣ್ಯರು ಉಪಸ್ಥಿತರಿದ್ದರು.
ತಿಂಗಳಾಂತದ್ಯಲ್ಲಿ ಆರಂಭ
ಜಿಲ್ಲಾ ಕೇಂದ್ರ ಬ್ಯಾಂಕಿನ ಎಲ್ಲಾ ಸೇವೆಗಳನ್ನು ಹಳ್ಳಿಗಳಲ್ಲಿರುವ ಗ್ರಾಮೀಣ ಕೃಷಿ ಸಹಕಾರ ಸಂಘಗಳಿಗೆ ಒದಗಿಸಲಾಗುವುದು. ಹೊಸ ಸಂಘಗಳಿಗೆ ಸಾಲ ಅನುಮೋದನೆಯ ಪ್ರಕ್ರಿಯೆಯು ಈ ತಿಂಗಳ ಅಂತ್ಯದಿಂದ ಪ್ರಾರಂಭವಾಗಲಿದೆ. ಜಿಲ್ಲಾ ಬ್ಯಾಂಕ್ ರೈತರಿಗೆ ಸೇರಿರುವುದರಿಂದ, ಅದು ರೈತರಿಗೆ ಹೊಸ ಉಪಕ್ರಮಗಳನ್ನು ಜಾರಿಗೆ ತರುತ್ತದೆ ಎಂದು ಅಣ್ಣಾಸಾಹೇಬ ಜೊಲ್ಲೆ ಹೇಳಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.