ಬೆಳಗಾವಿ: ‘ಜಿಲ್ಲೆಯಲ್ಲಿ ಜೂನ್ 21ರಿಂದ ಪುಸ್ತಕ ಹಾಗೂ ಸ್ಟೇಷನರಿಗಳನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕು’ ಎಂದು ಜಿಲ್ಲಾ ಪುಸ್ತಕ ಮತ್ತು ಸ್ಟೇಷನರಿಗಳ ಮಾರಾಟಗಾರರ ಸಂಘದ ಅಧ್ಯಕ್ಷ ಸುಭಾಷ ಡಿ. ಇಮಾನದಾರ ಒತ್ತಾಯಿಸಿದರು.
‘ಒಂದೂವರೆ ವರ್ಷದಿಂದಲೂ ಶಾಲಾ–ಕಾಲೇಜುಗಳು ಸಮರ್ಪಕವಾಗಿ ನಡೆಯದೆ ಇರುವುದರಿಂದ ನಮಗೆ ಸರಿಯಾದ ಅವಕಾಶ ಸಿಗುತ್ತಿಲ್ಲ. ಕೋವಿಡ್ ಲಾಕ್ಡೌನ್ ಕಾರಣದಿಂದ ಪುಸ್ತಕಗಳನ್ನು ಮಾರಾಟ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಇದರಿಂದ ನಾವು ಬಹಳಷ್ಟು ತೊಂದರೆ ಮತ್ತು ನಷ್ಟ ಅನುಭವಿಸಿದ್ದೇವೆ’ ಎಂದುಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
‘ಕುಟುಂಬಗಳ ನಿರ್ವಹಣೆ, ಅಂಗಡಿಗಳ ಬಾಡಿಗೆ ತುಂಬುವುದಕ್ಕೂ ತೊಂದರೆಯಾಗಿದೆ. ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು’ ಎಂದು ಕೋರಿದರು.
‘ಶಾಲಾ–ಕಾಲೇಜುಗಳು ಆನ್ಲೈನ್ನಲ್ಲಿ ಆರಂಭವಾಗುತ್ತಿದ್ದು ಪಠ್ಯಪುಸ್ತಕಗಳು ಹಾಗೂ ಸ್ಟೇಷನರಿಗಳಿಗೆ ಪೋಷಕರಿಂದ ಬೇಡಿಕೆ ಬರುತ್ತಿದೆ. ಹೀಗಾಗಿ,ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಪುಸ್ತಕಗಳನ್ನು ಮಾರಲು ಅವಕಾಶ ಕೊಡಬೇಕು’ ಎಂದರು.
‘ತೆರಿಗೆ ಪಾವತಿಸುವ ನಮಗೆ, ಕೋವಿಡ್ ಸಂಕಷ್ಟದ ಸಂದರ್ಭದಲ್ಲೂ ಆರ್ಥಿಕ ನೆರವು ಸಿಕ್ಕಿಲ್ಲ. ತೆರಿಗೆ ಶುಲ್ಕ ಹಾಗೂ ವಿದ್ಯುತ್ ಬಿಲ್ ಪಾವತಿಯಿಂದಲೂ ವಿನಾಯಿತಿ ದೊರೆತಿಲ್ಲ. ಪುಸ್ತಕ ಹಾಗೂ ಸ್ಟೇಷನರಿಗಳು ಅವಶ್ಯ ಸಾಮಗ್ರಿಗಳಾಗಿದ್ದರೂ ಅಂಗಡಿಗಳನ್ನು ತೆರೆಯಲು ಅಧಿಕಾರಿಗಳು ಬಿಡುತ್ತಿಲ್ಲ. ಹಲವು ಬಾರಿ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ’ ಎಂದು ತಿಳಿಸಿದರು.
‘ಸರ್ಕಾರ ನಮಗೂ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಬೇಕು’ ಎಂದು ಒತ್ತಾಯಿಸಿದರು.
‘ಲಾಕ್ಡೌನ್ ಮುಗಿಯುತ್ತಿದ್ದಂತೆಯೇ ಅಂಗಡಿಗಳನ್ನು ತೆರೆಯಲು ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ, ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.