ADVERTISEMENT

ಬೆಳಗಾವಿ: ಸಿಬಿಟಿ ‘ಉದ್ಘಾಟನೆ’ಯಾದರೂ ತಪ್ಪದ ಪ್ರಯಾಣಿಕರ ‘ಬವಣೆ’

ಸ್ಮಾರ್ಟ್‌ಸಿಟಿ ಯೋಜನೆಯಿಂದ ಸಾರಿಗೆ ಸಂಸ್ಥೆಗೆ ಇನ್ನೂ ಹಸ್ತಾಂತರವಾಗದ ಕಾಮಗಾರಿ

ಇಮಾಮ್‌ಹುಸೇನ್‌ ಗೂಡುನವರ
Published 20 ಅಕ್ಟೋಬರ್ 2025, 1:59 IST
Last Updated 20 ಅಕ್ಟೋಬರ್ 2025, 1:59 IST
<div class="paragraphs"><p>ಬೆಳಗಾವಿಯಲ್ಲಿ ಹೊಸದಾಗಿ ನಿರ್ಮಿಸಿದ ನಗರ ಬಸ್‌ ನಿಲ್ದಾಣ </p></div>

ಬೆಳಗಾವಿಯಲ್ಲಿ ಹೊಸದಾಗಿ ನಿರ್ಮಿಸಿದ ನಗರ ಬಸ್‌ ನಿಲ್ದಾಣ

   

ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ

ಬೆಳಗಾವಿ: ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಿಸಿದ ಇಲ್ಲಿನ ನಗರ ಬಸ್‌ ನಿಲ್ದಾಣ (ಸಿಬಿಟಿ) ಉದ್ಘಾಟನೆಯಾಗಿ ಎರಡು ವಾರಗಳಾದರೂ, ಇನ್ನೂ ಕಾರ್ಯಾರಂಭ ಮಾಡಿಲ್ಲ. ಪ್ರಯಾಣಿಕರ ಪರದಾಟ ತಪ್ಪಿಲ್ಲ.

ADVERTISEMENT

ಕೇಂದ್ರೀಯ ಬಸ್‌ ನಿಲ್ದಾಣ ಪಕ್ಕದಲ್ಲೇ ಸಿಬಿಟಿ ಇತ್ತು. ಹಲವು ದಶಕಗಳ ಹಿಂದೆ ನಿರ್ಮಿಸಿದ್ದ ನಿಲ್ದಾಣ ಇಕ್ಕಟ್ಟಿನಿಂದ ಕೂಡಿತ್ತು. ಪ್ರಯಾಣಿಕರಿಗೆ ಕನಿಷ್ಠ ಮೂಲಸೌಕರ್ಯವೂ ಮರೀಚಿಕೆಯಾಗಿತ್ತು. ಹಾಗಾಗಿ ಅದನ್ನು ತೆರವುಗೊಳಿಸಿ, ಸ್ಮಾರ್ಟ್‌ಸಿಟಿ ಯೋಜನೆಯಡಿ ಹೊಸದಾಗಿ ಸಿಬಿಟಿ ನಿರ್ಮಿಸಲಾಗಿದೆ. 

2018ರಲ್ಲೇ ಕಾಮಗಾರಿಗೆ ಕಾರ್ಯಾದೇಶ ಸಿಕ್ಕರೂ, ಅದು ಪೂರ್ಣಗೊಂಡಿದ್ದು 2025ರಲ್ಲಿ. ಕೊರೊನಾ ಸೃಷ್ಟಿಸಿದ ಆತಂಕ, ನೆರೆ ಪರಿಸ್ಥಿತಿ ತಂದಿಟ್ಟ ಸಂಕಟ, ಜಾಗದ ವಿವಾದ ಬಿಟ್ಟುಬಿಡದೆ ಕಾಡಿದವು. ಕಾಮಗಾರಿಗೆ ವಿಧಿಸಿದ್ದ ಗಡುವು ಹಲವು ಬಾರಿ ಮುಗಿದವು.

ಹೀಗೆ ಅನೇಕ ತೊಡಕುಗಳ ಮಧ್ಯೆಯೂ ಏಳು ವರ್ಷ ಕುಂಟುತ್ತ, ತೆವಳುತ್ತ ಸಾಗಿದ ಕಾಮಗಾರಿ ಇದೇ ವರ್ಷ ಪೂರ್ಣಗೊಂಡಿದೆ. 2025ರ ಅಕ್ಟೋಬರ್‌ 4ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಗೊಂಡಿದೆ. ಆದರೆ, ಇನ್ನೂ ಕಾರ್ಯಾರಂಭ ಮಾಡದ್ದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೆಜ್ಜೆಹೆಜ್ಜೆಗೂ ಸಮಸ್ಯೆ: ಸದ್ಯ ಬೆಳಗಾವಿ ಕೇಂದ್ರೀಯ ಬಸ್‌ ನಿಲ್ದಾಣದ ಒಂದುಬದಿ ತಾತ್ಕಾಲಿಕವಾಗಿ ಸಿಬಿಟಿ ಕಾರ್ಯನಿರ್ವಹಿಸುತ್ತಿದೆ. ನಗರ ಮತ್ತು ಉಪನಗರ ವ್ಯಾಪ್ತಿಯ ವಿವಿಧ ಬಡಾವಣೆಗಳಿಗೆ ಅಲ್ಲಿಂದ 150ಕ್ಕೂ ಅಧಿಕ ಬಸ್‌ ಕಾರ್ಯಾಚರಣೆ ನಡೆಸುತ್ತಿವೆ.

ಆದರೆ, ಈಗ ಸಿಬಿಟಿ ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲಿ ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಮೂಲಸೌಕರ್ಯವಿಲ್ಲ. ಸೂಕ್ತ ಪ್ಲಾಟ್‌ಫಾರಂ ಇಲ್ಲ. ನೆರಳು, ಬೆಳಕಿನ ವ್ಯವಸ್ಥೆ ಇಲ್ಲ. ಶುದ್ಧ ಕುಡಿಯುವ ನೀರಿನ ಲಭ್ಯತೆ ಇಲ್ಲ. ಹೀಗೆ ‘ಇಲ್ಲ’ಗಳ ಪಟ್ಟಿಯೇ ದೊಡ್ಡದಿದೆ.

ಮಳೆಗಾಲದಲ್ಲಂತೂ ಆಶ್ರಯಕ್ಕಾಗಿ ಜಾಗ ಸಿಗದೆ ಪ್ರಯಾಣಿಕರು ಪರದಾಡುವ ಸ್ಥಿತಿ ಇದೆ. ಹೀಗಿದ್ದರೂ ಸಿಬಿಟಿ ಕಾರ್ಯಾರಂಭಕ್ಕೆ ವಿಳಂಬ ಮಾಡುತ್ತಿರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.

ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸುತ್ತಿರುವ ಸಿಬಿಟಿಯಲ್ಲಿ ಸೂಕ್ತ ಆಸನ ವ್ಯವಸ್ಥೆ ಇಲ್ಲದಿದ್ದರಿಂದ ಪ್ರಯಾಣಿಕರು ಎಲ್ಲೆಂದರಲ್ಲಿ ಕುಳಿತಿರುವುದು

‘ಹಸ್ತಾಂತರವಾಗಬೇಕಿದೆ’

‘ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಿಸಿದ ಸಿಬಿಟಿಯನ್ನು ನಮಗೆ ಇನ್ನೂ ಅಧಿಕೃತವಾಗಿ ಹಸ್ತಾಂತರಿಸಿಲ್ಲ. ಹಾಗಾಗಿ ಕೇಂದ್ರೀಯ ಬಸ್‌ ನಿಲ್ದಾಣದ ಒಂದು ಬದಿಯನ್ನು ತಾತ್ಕಾಲಿಕವಾಗಿ ಸಿಬಿಟಿಗೆ ಬಳಸಿಕೊಳ್ಳುತ್ತಿದ್ದೇವೆ. ಹೊಸ ನಿಲ್ದಾಣ ಹಸ್ತಾಂತರವಾದ ತಕ್ಷಣವೇ ಕಾರ್ಯಾರಂಭ ಮಾಡಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುತ್ತೇವೆ’ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಲ್‌.ಗುಡೆನ್ನವರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮತ್ತೊಮ್ಮೆ ಪರಿಶೀಲಿಸಿ ಹಸ್ತಾಂತರ’

‘ಮುಖ್ಯಮಂತ್ರಿಗಳು ಸಿಬಿಟಿ ಕಾಮಗಾರಿ ಉದ್ಘಾಟಿಸಿದ್ದಾರೆ. ಮತ್ತೊಮ್ಮೆ ಕಾಮಗಾರಿ ಪರಿಶೀಲಿಸಿ ಎಲ್ಲ ಸೌಲಭ್ಯಗಳು ಸುಸ್ಥಿತಿಯಲ್ಲಿ ಇರುವುದನ್ನು ಖಾತ್ರಿಪಡಿಸಿಕೊಂಡು ಸಾರಿಗೆ ಸಂಸ್ಥೆಗೆ ಹಸ್ತಾಂತರಿಸುತ್ತೇವೆ. ಇನ್ನೂ ಪ್ರಕ್ರಿಯೆ ವಿಳಂಬವಾಗದು’ ಎಂದು ಸ್ಮಾರ್ಟ್‌ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕಿ ಬಿ.ಶುಭ ಪ್ರತಿಕ್ರಿಯಿಸಿದರು.

ಸುಸಜ್ಜಿತ ನಿಲ್ದಾಣ

ಈಗ ನಿರ್ಮಾಣವಾಗಿರುವ ಸಿಬಿಟಿಯನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದ್ದು ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಹೈಟೆಕ್‌ ಸೌಕರ್ಯಗಳಿವೆ. ಮೂರು ಮಹಡಿಗಳ ಕಟ್ಟಡದಲ್ಲಿ 28 ಬಸ್‌ ಬೇಗಳಿವೆ. ಪ್ರಯಾಣಿಕರಿಗೆ ಸೂಕ್ತ ಆಸನ ವ್ಯವಸ್ಥೆ ಟಿಕೆಟ್‌ ವಿಚಾರಣೆ ಕೊಠಡಿ ಮಹಿಳೆಯರಿಗೆ ವಿಶ್ರಾಂತಿ ಕೊಠಡಿ ಲಿಫ್ಟ್‌ ಎಸ್ಕಲೇಟರ್‌ಗಳ ಸೌಲಭ್ಯ ಲಭ್ಯವಿದೆ.

‘ಕಾರ್ಯಾರಂಭ ಮಾಡದಿದ್ದರೇನು ಲಾಭ?

‘ಹೈಟೆಕ್‌ ಮಾದರಯಲ್ಲಿ ಸಿಬಿಟಿ ನಿರ್ಮಿಸಿದ್ದಾರೆ ಎಂಬುದೇನೋ ನಿಜ. ಆದರೆ ಅದು ಕಾರ್ಯಾರಂಭ ಮಾಡದಿದ್ದರೆ ಪ್ರಯಾಣಿಕರಿಗೇನು ಲಾಭ? ತ್ವರಿತವಾಗಿ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳಿಸಿ ಬೇಗ ಸಿಬಿಟಿ ಕಾರ್ಯಾರಂಭ ಮಾಡಲಿ’ ಎಂದು ಬೆಳಗಾವಿ ತಾಲ್ಲೂಕಿನ ಮುತಗಾದ ಪ್ರಯಾಣಿಕ ದಿನೇಶ ವಾಳ್ವೇಕರ ಹೇಳಿದರು.

ಅಂಕಿ–ಸಂಖ್ಯೆ

1965 ಸಿಬಿಟಿಯಿಂದ ನಿತ್ಯ ನಿರ್ಗಮಿಸುವ ಬಸ್‌ಗಳ ಟ್ರಿಪ್‌ಗಳು 96 ಸಾವಿರ ಸಿಬಿಟಿ ಮೂಲಕ ಪ್ರತಿದಿನ ಸಂಚರಿಸುವ ಪ್ರಯಾಣಿಕರು 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.