
ಬೆಳಗಾವಿ: ಅರಣ್ಯ ಇಲಾಖೆಯ ಬೆಳಗಾವಿ ವೃತ್ತದಲ್ಲಿ ನೂರಕ್ಕೂ ಹೆಚ್ಚು ಉಪ ವಲಯ ಅರಣ್ಯಾಧಿಕಾರಿಗಳ ಹುದ್ದೆಗಳು ಖಾಲಿ ಇವೆ. ಇವೆಲ್ಲವೂ ಬಡ್ತಿ ಕೋಟಾದ ಹುದ್ದೆಗಳಾಗಿವೆ. ಇವುಗಳಿಗೆ ಶೀಘ್ರ ಪದೋನ್ನತಿ ನೀಡಬೇಕು ಎಂಬ ಗಸ್ತು ಅರಣ್ಯ ಪಾಲಕರು ಹಾಗೂ ಅರಣ್ಯ ವೀಕ್ಷಕರ ಬೇಡಿಕೆಗೆ ಸರ್ಕಾರ ಇನ್ನೂ ಸ್ಪಂದಿಸಿಲ್ಲ.
ಕಳೆದ ವರ್ಷ (2024ರ ಆಗಸ್ಟ್ 30)ವೇ ಸರ್ಕಾರ ಗಸ್ತು ಅರಣ್ಯ ಪಾಲಕರ ಅಂತಿಮ ಜ್ಯೇಷ್ಠತಾ ಪಟ್ಟಿ ಪ್ರಕಟಿಸಿದೆ. ಅದರಂತೆ ಬೆಳಗಾವಿ ವೃತ್ತದಲ್ಲಿ ನೂರಕ್ಕೂ ಹೆಚ್ಚು ಹುದ್ದೆಗಳಿಗೆ ಬಡ್ತಿ ನೀಡಿ ಭರ್ತಿ ಮಾಡುವುದು ಶಿಲ್ಕು ಬಿದ್ದಿದೆ. ಈ ಬಗ್ಗೆ ಸಾಕಷ್ಟು ಮನವಿ ಸಲ್ಲಿಸಿದರೂ ಸರ್ಕಾರ ಕಿವಿಗೊಟ್ಟಿಲ್ಲ. ಮೇಲಧಿಕಾರಿಗಳೂ ಇವರ ಮನವಿಗೆ ಸರಿಯಾಗಿ ಸ್ಪಂದಿಸಿಲ್ಲ. ಹೀಗಾಗಿ, ಗಸ್ತು ಸಿಬ್ಬಂದಿ ಪರದಾಡುವುದು ತಪ್ಪಿಲ್ಲ ಎಂಬುದು ಅವರ ತಕರಾರು.
2017ರಿಂದ ಇಲ್ಲಿಯವರೆಗೂ ವಿವಿಧ ಆದೇಶಗಳಲ್ಲಿ ದೀರ್ಘಾವಧಿಯವರೆಗೆ ನಿಯಮ 32ರಡಿ ಕರ್ತವ್ಯ ನಿರ್ವಹಿಸುತ್ತಿರುವ ಉಪ ವಲಯ ಅರಣ್ಯಾಧಿಕಾರಿಗಳಿಗೆ ತಕ್ಷಣವೇ ನಿಯಮ 42ರಡಿ ಬಡ್ತಿ ನೀಡಬೇಕು. ಸದರಿ ನೌಕರರ ಹುದ್ದೆಗಳನ್ನು ಟಿಸಿಎಂಎಸ್ ವರ್ಗಾವಣೆಯಲ್ಲಿ ಖಾಲಿ ಹುದ್ದೆಗಳು ಎಂದು ಪರಿಗಣಿಸುತ್ತಿದೆ. ಮೂರು (3) ತಿಂಗಳಿಗೊಮ್ಮೆ ಪದೇ ಪದೇ ವರ್ಗಾವಣೆ ಆಗುವ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ ಕುಟುಂಬ, ಮಕ್ಕಳ ಶಿಕ್ಷಣ ಮತ್ತು ವಸತಿ ಯಾವುದೂ ಸ್ಥಿರವಾಗದಿರುವುದರಿಂದ ಅನಿಶ್ಚಿತತೆ ಮುಂದುವರಿದಿದೆ. ನೌಕರರನ್ನು ಮಾನಸಿಕವಾಗಿ ಕುಗ್ಗಿಸಿದೆ ಎಂದೂ ಹಲವು ಸಿಬ್ಬಂದಿ ಸಂಕಷ್ಟ ಹೇಳಿಕೊಂಡಿದ್ದಾರೆ.
ಕಳೆದ ಐದು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಉಪ ವಲಯ ಅರಣ್ಯಾಧಿಕಾರಿ ವೃಂದದ ಜ್ಯೇಷ್ಠತಾ ಪಟ್ಟಿಯನ್ನು ಕೂಡಲೇ ಅಂತಿಮಗೊಳಿಸಿ ಪ್ರಕಟಿಸಬೇಕು. ಬೇರೆ ಬೇರೆ ವೃತ್ತಗಳಲ್ಲಿ ಗಸ್ತು ಅರಣ್ಯ ಪಾಲಕ ಹುದ್ದೆಯಿಂದ ಉಪ ವಲಯ ಅರಣ್ಯಾಧಿಕಾರಿ ಹುದ್ದೆಗೆ ಬಡ್ತಿಹೊಂದಿ ಬೆಳಗಾವಿ ವೃತ್ತಕ್ಕೆ ಬಂದು ಮೇಲಾಧಿಕಾರಿ ಆದವರನ್ನು ಅವರ ಮೂಲ ಹುದ್ದೆಗೆ ನಿಷ್ಕರ್ಷಿಸಿ, ಸೇವಾ ಹಿರಿತನ ತಾರತಮ್ಯವನ್ನು ಹೋಗಲಾಡಿಸಲು ಕ್ರಮ ಕೈಗೊಳ್ಳಬೇಕು ಎಂದೂ ಬೇಡಿಕೆ ಮಂಡಿಸಿದ್ದಾರೆ.
ಈ ಬಗ್ಗೆ ಬೆಳಗಾವಿಯಲ್ಲಿ ಸೋಮವಾರ ಶಾಸಕ ಆಸಿಫ್ ಸೇಠ್ ಅವರಿಗೂ ಮನವಿ ಸಲ್ಲಿಸಿದರು. ತಮ್ಮ ಬೇಡಿಕೆಗಳು ನ್ಯಾಯಸಮ್ಮತ ಆಗಿವೆ. ಈಗಾಗಲೇ ಸಾಕಷ್ಟು ವಿಳಂಬ ಮಾಡಿದ್ದರಿಂದ ಗಸ್ತು ಸಿಬ್ಬಂದಿ ಸಂಕಷ್ಟ ಎದುರಿಸುತ್ತಿದ್ದೇವೆ. ತಾವು ಸರ್ಕಾರದ ಗಮನಕ್ಕೆ ತಂದು ಬೇಡಿಕೆ ಈಡೇರಿಸಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.
ಒಂದು ವೇಳೆ ಡಿ.6ರೊಳಗೆ ಸರ್ಕಾರ ನಿರ್ಧಾರ ಪ್ರಕಟಿಸದಿದ್ದರೆ ಅಂದಿನಿಂದ ಹೋರಾಟ ಆರಂಭಿಸಲಾಗುವುದು. ಡಿ.8ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಆ ಸಂದರ್ಭದಲ್ಲೂ ಹೋರಾಟ ಮಾಡಲಾಗುವುದು. ಇದರಿಂದ ಸರ್ಕಾರಕ್ಕೆ ಮುಜುಗರ ಆಗುವುದು. ಅದನ್ನು ತಪ್ಪಿಸಲು ಬೇರಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದೂ ಆಗ್ರಹಿಸಿದ್ದಾರೆ.
ಅರಣ್ಯ ಗಸ್ತು ಸಿಬ್ಬಂದಿ ಬೇಡಿಕೆ ನ್ಯಾಯಸಮ್ಮತವಾಗಿವೆ. ಚಳಿಗಾಲದ ಅಧೀವೇಶನದಲ್ಲಿ ಚುಕ್ಕೆ ಗುರುತಿನ ಪ್ರಶ್ನೆ ಮೂಲಕ ಪ್ರಶ್ನಿಸಿ ಸಮಸ್ಯೆ ಬಗೆಹರಿಸುತ್ತೇನೆ.ಆಸಿಫ್ ಸೇಠ್, ಶಾಸಕ
ಅರಣ್ಯ ವೀಕ್ಷಕರು ಗಸ್ತು ಅರಣ್ಯ ಪಾಲಕರು ಮತ್ತು ಉಪ ವಲಯ ಅರಣ್ಯ ಅಧಿಕಾರಿಗಳು ಅರಣ್ಯ ರಕ್ಷಣೆಯ ಬೆನ್ನೆಲುಬು. ಅವರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು.ಗಿರಿಧರ ಕುಲಕರ್ಣಿ, ವನ್ಯಜೀವಿ ಸಂರಕ್ಷಣಾವಾದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.