ಬೆಳಗಾವಿ: ‘ಇಲ್ಲಿನ ವೃತ್ತಿಪರರ ವೇದಿಕೆ ನೇತೃತ್ವದಲ್ಲಿ ಜ. 27ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ನಗರದ ವಿವಿಧೆಡೆ ಆರೋಗ್ಯ ತಪಾಸಣೆ, ಚಿಕಿತ್ಸೆ ಮತ್ತು ಜಾಗೃತಿ ಕಾರ್ಯಕ್ರಮವನ್ನು ಉಚಿತವಾಗಿ ಆಯೋಜಿಸಲಾಗಿದೆ’ ಎಂದು ಅಧ್ಯಕ್ಷ ಬಿ.ಎಸ್. ಪಾಟೀಲ ತಿಳಿಸಿದರು.
‘ಗಾಂಧಿನಗರದ ಬಂಟರ ಭವನ, ವಂಟಮುರಿ ಕಾಲೊನಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಅನಗೋಳದ ಕುರುಬರ ಗಲ್ಲಿಯ ಮರಾಠಿ ಬಾಲಕರ ಶಾಲೆಯಲ್ಲಿ ತಪಾಸಣೆ ನಡೆಯಲಿದೆ. ಪ್ರತಿ ಕೇಂದ್ರದಲ್ಲೂ 2000ಕ್ಕೂ ಹೆಚ್ಚಿನ ಮಂದಿ ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಆರೋಗ್ಯ ಇಲಾಖೆ, ಬಿಮ್ಸ್, ನಗರಪಾಲಿಕೆ, ಕೊಳೆಗೇರಿ ಅಭಿವೃದ್ಧಿ ಮಂಡಳಿ, ದಂತ ವೈದ್ಯರ ಸಂಘ, ಕೆಎಲ್ಇ ಆಸ್ಪತ್ರೆ, ಲೇಕ್ವ್ಯೂ ಆಸ್ಪತ್ರೆ, ವಿಜಯ ಆರ್ಥೊಕೇರ್ ಆಸ್ಪತ್ರೆ, ಭಾರತೀಯ ವೈದ್ಯಕೀಯ ಸಂಘ ಬೆಳಗಾವಿ ಘಟಕ, ಸಂಯುಕ್ತ ಸಾಮಾಜಿಕ ಕ್ಷೇಮಾಭಿವೃದ್ಧಿ ಸಂಘ, ಭಾರತ ನಿರ್ಮಾಣ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾಗಿದೆ. 75ಕ್ಕೂ ಹೆಚ್ಚಿನ ವೈದ್ಯರು ಭಾಗವಹಿಸಿ, ತಪಾಸಿಸುವರು ಹಾಗೂ ಚಿಕಿತ್ಸೆ ನೀಡುವರು. ಔಷಧಿಗಳನ್ನೂ ಕೂಡ ಉಚಿತವಾಗಿ ನೀಡಲಾಗುವುದು. ಅಗತ್ಯಬಿದ್ದರೆ ಶಸ್ತ್ರಚಿಕಿತ್ಸೆಯನ್ನು ಕೂಡ ಉಚಿತವಾಗಿ ಕೊಡಿಸಲಾಗುವುದು. ನೇತ್ರ ತಪಾಸಣೆಯೂ ನಡೆಯಲಿದೆ. ಕೊಳೆಗೇರಿಗಳ ನಿವಾಸಿಗಳು ಹಾಗೂ ಆರ್ಥಿಕವಾಗಿ ಸಬಲರಲ್ಲದವರು ಪ್ರಯೋಜನ ಪಡೆದುಕೊಳ್ಳಬೇಕು ಎನ್ನುವುದು ನಮ್ಮ ಆಶಯವಾಗಿದೆ’ ಎಂದು ಹೇಳಿದರು.
‘ಕಾರ್ಯಕ್ರಮ ಮುಗಿದ ನಂತರವೂ, ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಖಾಸಗಿ ಆಸ್ಪತ್ರೆಗಳವರು ಮುಂದೆ ಬಂದಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.