ಬೆಳಗಾವಿ: ಜಿಲ್ಲೆಯ ಅಥಣಿಯ ಬಿ.ಎಲ್. ಪಾಟೀಲ (ಬಸವಪ್ರಭು ಲಖಮಗೌಡ ಪಾಟೀಲ) ಅವರು 2020–21ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಗಿದ್ದಾರೆ.
ಅವರು ಮಾಡಿದ ಸಮಾಜಸೇವೆಯನ್ನು ಪರಿಗಣಿಸಿ ಸರ್ಕಾರವು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಅವರು ಗಡಿ ಅಥಣಿಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ದೇವದಾಸಿ/ ವೇಶ್ಯೆಯರ ಮಕ್ಕಳಿಗಾಗಿ ವಸತಿ ಶಾಲೆಯನ್ನು ಆರಂಭಿಸಿದರು. ಬಡವರು, ನಿರ್ಗತಿಕರು, ಶೋಷಿತರು ಮತ್ತು ದಲಿತರಿಗೆ ಕಾನೂನು ನೆರವು, ಜನತಾ ನ್ಯಾಯಾಲಯ ನಡೆಸಿಕೊಂಡು ಬಂದಿದ್ದಾರೆ. ಆ ವರ್ಗದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದಾರೆ.
‘ದೇವದಾಸಿಯರು, ಶೋಷಿತರು, ನೋವುಂಡವರನ್ನು ಗುರುತಿಸುವ ಪರಂಪರೆ ನಮ್ಮ ದೇಶದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿಲ್ಲ. ಸಮ ಸಮಾಜಕ್ಕಾಗಿ ಹೋರಾಡಿದ ಮಹಾಮಾನವತಾವಾದಿ ಬಸವಣ್ಣನನ್ನೇ ಗುರುತಿಸದ ಸಮಾಜ ನಮ್ಮದು. ಹೀಗಿರುವಾಗ ನಾನು ಹಾಗೂ ನನ್ನ ಸಂಸ್ಥೆ ‘ವಿಮೋಚನಾ’ ಮಾಡಿದ ಅಲ್ಪಸೇವೆಯನ್ನು ಪರಿಗಣಿಸಿ ಸರ್ಕಾರವು ಪ್ರತಿಷ್ಠಿತ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ’ ಎಂದು ಪಾಟೀಲ ಅವರು ತಿಳಿಸಿದರು.
‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಈ ಪ್ರಶಸ್ತಿಯು ದೇವದಾಸಿಯರು, ನನ್ನ ಸಂಸ್ಥೆಯ ಎಲ್ಲ ಕಾರ್ಯಕರ್ತರಿಗೆ ಸಲ್ಲಬೇಕು. ಕೆಳಗೆ ಬಿದ್ದವರು, ತುಳಿತಕ್ಕೆ ಒಳಗಾದವರು ಹಾಗೂ ನೋವುಂಡವರ ಕಣ್ಣೀರು ಒರೆಸುವ ಕೆಲಸವನ್ನು ಸರ್ಕಾರ ಮುಂದೆಯೂ ಮಾಡಲಿ. ಪ್ರಶಸ್ತಿ–ಪುರಸ್ಕಾರಗಳನ್ನು ನೀಡಿ ಗೌರವಿಸಲಿ’ ಎಂದು ಆಶಿಸಿದರು.
‘ನನ್ನ ಬೆಳವಣಿಗೆಯಲ್ಲಿ ಮಾಧ್ಯಮದ ಪಾತ್ರವೂ ದೊಡ್ಡದಿದೆ’ ಎಂದರು.
‘ಪ್ರಶಸ್ತಿಯನ್ನು ಅತ್ಯಂತ ಗೌರವದಿಂದ ಸ್ವೀಕರಿಸುತ್ತೇನೆ’ ಎಂದು ತಿಳಿಸಿದರು.
ಅವರಿಗೆ ಆ.20ರಂದು ದೇವರಾಜ ಅರಸು ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.