ಬೆಳಗಾವಿಯ ವಡಗಾವಿಯ ಮಂಗಾಯಿ ದೇವಸ್ಥಾನದ ಆವರಣದಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು
ಪ್ರಜಾವಾಣಿ ಚಿತ್ರ
ಬೆಳಗಾವಿ: ಇಲ್ಲಿನ ವಡಗಾವಿಯ ಪಾಟೀಲ ಗಲ್ಲಿಯ ಮಂಗಾಯಿ ದೇವಿ ದೇವಸ್ಥಾನ ಜುಲೈ 22ರಿಂದ 24ರವರೆಗೆ ನಡೆಯಲಿರುವ ಜಾತ್ರೆಗೆ ಸಜ್ಜಾಗಿದೆ. ಅಂತಿಮ ಹಂತದ ಸಿದ್ಧತೆ ಭರದಿಂದ ಸಾಗಿವೆ.
ಪ್ರತಿವರ್ಷ ಅದ್ದೂರಿಯಾಗಿ ನಡೆಯುವ ಈ ಜಾತ್ರೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಸಾವಿರಾರು ಭಕ್ತರು ಸೇರುತ್ತಾರೆ. ದೇವಸ್ಥಾನದ ಮೇಲೆ ಕೋಳಿ ಮರಿಗಳನ್ನು ಹಾರಿಸಿ ಭಕ್ತಿ ಸಮರ್ಪಿಸುತ್ತಾರೆ. ತಮ್ಮ ಇಷ್ಟಾರ್ಥಗಳು ಈಡೇರಿದ ಹಿನ್ನೆಲೆಯಲ್ಲಿ ಕೆಲವರು ವಿವಿಧ ಕಾಣಿಕೆ ಅರ್ಪಿಸುತ್ತಾರೆ.
‘ಈ ವರ್ಷ ಮುಖ್ಯ ಜಾತ್ರೆ ಮೂರು ದಿನ ನೆರವೇರಲಿದೆ. ಭಕ್ತರು ಒಂದು ವಾರದವರೆಗೂ ಭೇಟಿ ಕೊಡುತ್ತಾರೆ. ದೇವರಿಗೆ ವಿಶೇಷ ಪೂಜೆ, ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ’ ಎಂದು ಅರ್ಚಕ ದೇವಿದಾಸ ಚವ್ಹಾಣ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.
‘ಸುರಕ್ಷತೆ ದೃಷ್ಟಿಯಿಂದ ಮಂಗಾಯಿ ದೇವಸ್ಥಾನ ಆವರಣದಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದೇವೆ. ಜನದಟ್ಟಣೆ ಆಗದಿರಲಿ ಮತ್ತು ದೇವಿ ದರ್ಶನ ಪಡೆಯಲು ಅನುಕೂಲವಾಗಲೆಂದು ಕೌಂಟರ್ ವ್ಯವಸ್ಥೆ ಮಾಡಿಸಿದ್ದೇವೆ. ಸಮರ್ಪಕ ಬೆಳಕಿನ ವ್ಯವಸ್ಥೆ ಕೈಗೊಂಡಿದ್ದೇವೆ. ಜನರು ಶಾಂತಿಯುತವಾಗಿ ಧಾರ್ಮಿಕ ಆಚರಣೆ ಕೈಗೊಳ್ಳಬೇಕು’ ಎಂದು ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.