ಬೆಳಗಾವಿ: ಅನುಮತಿ ಪಡೆಯದೆ ಇಲ್ಲಿನ ತಿಳಕವಾಡಿಯ ವ್ಯಾಕ್ಸಿನ್ ಡಿಪೊ ಮೈದಾನ ಬಳಿ ಮಹಾಮೇಳಾವ ಆಯೋಜಿಸಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ಕಾರ್ಯಕರ್ತರು ಮಹಾನಗರ ಪಾಲಿಕೆ ಸಿಬ್ಬಂದಿಗೆ ಆವಾಜ್ ಹಾಕಿದರು.
ವಿಧಾನಮಂಡಲ ಚಳಿಗಾಲ ಅಧಿವೇಶನಕ್ಕೆ ಪರ್ಯಾಯವಾಗಿ ಮಹಾಮೇಳ ಆಯೋಜನೆಗೆ ಕಾರ್ಯಕರ್ತರು ವೇದಿಕೆ ನಿರ್ಮಿಸಿದ್ದಾರೆ.
ಈ ಅನಧಿಕೃತ ವೇದಿಕೆಯನ್ನು ಪಾಲಿಕೆ ಸಿಬ್ಬಂದಿ ತೆರವುಗೊಳಿಸಲು ಮುಂದಾದಾಗ, ಸಮಿತಿಯವರು ಉದ್ಧಟತನ ಪ್ರದರ್ಶಿಸಿದರು.
ಎಂಇಎಸ್ ಮುಖಂಡರಾದ ದೀಪಕ ದಳವಿ ಹಾಗೂ ಶುಭಂ ಶೆಳಕೆ, ಈ ಸ್ಥಳದಿಂದ ಹೋಗುವಂತೆ ಸಿಬ್ಬಂದಿಗೆ ಬೆದರಿಕೆ ಹಾಕಿದರು. ಆದರೆ, ಸ್ಥಳದಲ್ಲಿದ್ದ ಪೊಲೀಸರು ಮೌನ ವಹಿಸಿದ್ದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ವೇದಿಕೆ ತೆರವಿಗೂ ಅಡ್ಡಿ: ಎಂಇಎಸ್ ನಾಯಕರೊಂದಿಗೆ ಸಭೆ ನಡೆಸಿದ ಮಹಾನಗರ ಪಾಲಿಕೆ ಅಧಿಕಾರಿಗಳು, ವೇದಿಕೆ ತೆರವಿಗೆ ಮುಂದಾಗಿದ್ದಾರೆ.
ವೇದಿಕೆಯಲ್ಲಿನ ಕುರ್ಚಿಗಳನ್ನು ತೆರವುಗೊಳಿಸಿ ವಾಹನದಲ್ಲಿ ಇರಿಸುತ್ತಿದ್ದಂತೆ ವೇದಿಕೆಗೇರಿದ ಎಂಇಎಸ್ ನಾಯಕರು, ಅದಕ್ಕೂ ಅಡ್ಡಿಪಡಿಸಿದ್ದಾರೆ.
ನಾವೂ ವೇದಿಕೆ ಬಿಟ್ಟು ಕದಲುವುದೇ ಇಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಪಾಲಿಕೆ ಅಧಿಕಾರಿಗಳು ಹಾಗೂ ಪೊಲೀಸರೊಂದಿಗೆ ವಾಗ್ವಾದವನ್ನೂ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.