ADVERTISEMENT

3 ಹೆಲಿಕಾಪ್ಟರ್ ನಿಯೋಜನೆ: ಬೆಳಗಾವಿಯಲ್ಲಿ 1.45 ಲಕ್ಷ ಜನರ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2019, 9:22 IST
Last Updated 9 ಆಗಸ್ಟ್ 2019, 9:22 IST
   

ಬೆಳಗಾವಿ: ನೆರೆಯ ಮಹಾರಾಷ್ಟ್ರದಿಂದ ಬಿಡಲಾಗುತ್ತಿರುವ ಭಾರಿ ಪ್ರಮಾಣದ ನೀರು ಹಾಗೂ ಧಾರಾಕಾರ ಮಳೆಯಿಂದಾಗಿ ಜಿಲ್ಲೆಯ ಹದಿನಾಲ್ಕು ತಾಲ್ಲೂಕುಗಳಲ್ಲೂ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಶುಕ್ರವಾರದವರೆಗೆ ಒಟ್ಟು 323 ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಇದುವರೆಗೆ 28,103 ಕುಟುಂಬಗಳನ್ನು ಸ್ಥಳಾಂತರಿಸಿ, ಪರಿಹಾರ ಕೇಂದ್ರಗಳಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ತಿಳಿಸಿದ್ದಾರೆ.

323 ಗ್ರಾಮಗಳು ಹಾಗೂ ಕೆಲವು ಪಟ್ಟಣ ಪ್ರದೇಶಗಳೂ ಸೇರಿದಂತೆ ಒಟ್ಟಾರೆ 1,45,368 ಜನರನ್ನು ಸ್ಥಳಾಂತರಿಲಾಗಿದೆ.

ADVERTISEMENT

ಅದೇ ರೀತಿ ಪ್ರವಾಹಕ್ಕೆ ಸಿಲುಕಿದ 43,972 ಜಾನುವಾರುಗಳನ್ನು ಕೂಡ ಸ್ಥಳಾಂತರಿಸುವ ಜೊತೆಗೆ ರಕ್ಷಣೆ ಮತ್ತು ಮೇವಿನ ವ್ಯವಸ್ಥೆ ಕಲ್ಪಿಸಲಾಗಿದೆ.

327 ಪರಿಹಾರ ಕೇಂದ್ರ ಸ್ಥಾಪನೆ:‌ಜಿಲ್ಲೆಯ ಎಲ್ಲ ಹದಿನಾಲ್ಕು ತಾಲ್ಲೂಕುಗಳಲ್ಲಿ ಇದುವರೆಗೆ 327 ಪರಿಹಾರ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಊಟೋಪಹಾರ, ವೈದ್ಯಕೀಯ ಸೌಲಭ್ಯ ಸೇರಿದಂತೆ ಎಲ್ಲ ಬಗೆಯ ವ್ಯವಸ್ಥೆ ಒದಗಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಈ ಪರಿಹಾರ ಕೇಂದ್ರಗಳಲ್ಲಿ 82,425 ಜನರು ಆಶ್ರಯ ಪಡೆದುಕೊಂಡಿದ್ದಾರೆ.

ಅದೇ ರೀತಿ ರಕ್ಷಿಸಲಾದ ಹಾಗೂ ಸ್ಥಳಾಂತರಿಸಲಾದ ಜಾನುವಾರುಗಳ ಪೈಕಿ 26,750 ಜಾನುವಾರುಗಳಿಗೆ ಪರಿಹಾರ ಕೇಂದ್ರದಲ್ಲಿ ಆಶ್ರಯ ಒದಗಿಸಲಾಗಿದೆ.

ಚಿಕ್ಕೋಡಿಯಲ್ಲಿ ಹೆಚ್ಚು ಸ್ಥಳಾಂತರ:ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನಲ್ಲಿ ಅತೀ ಹೆಚ್ಚು 6953 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
ಅಥಣಿ-4351, ರಾಯಬಾಗ-4349, ಖಾನಾಪುರ-236, ಹುಕ್ಕೇರಿ-975, ಗೋಕಾಕ-1082, ಕಾಗವಾಡ-4599, ನಿಪ್ಪಾಣಿ-2973, ಮೂಡಲಗಿ-1100, ಬೆಳಗಾವಿ-546, ಬೈಲಹೊಂಗಲ-38, ರಾಮದುರ್ಗ-628, ಸವದತ್ತಿ-631 ಹಾಗೂ ಕಿತ್ತೂರು-27 ಕುಟುಂಬಗಳನ್ನು ಆಗಸ್ಟ್ 9ರವರೆಗೆ ಸ್ಥಳಾಂತರಿಸಲಾಗಿದೆ.

3 ಹೆಲಿಕಾಪ್ಟರ್ ನಿಯೋಜನೆ:ಪ್ರವಾಹಕ್ಕೆ ಸಿಲುಕಿರುವ ಜನರ ರಕ್ಷಣೆಗೆ ಸೇನೆಯ ಮೂರು ಹೆಲಿಕಾಪ್ಟರ್ ಗಳನ್ನು ನಿಯೋಜಿಸಲಾಗಿದೆ.

ಹೆಲಿಕಾಪ್ಟರ್ ಗಳನ್ನು ಬಳಸಿಕೊಂಡು ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿರುವ ನೌಕಾ ಮತ್ತು ವಾಯುಸೇನೆಯ ಯೋಧರು ಒಟ್ಟು 44 ಜನರನ್ನು ರಕ್ಷಿಸಿದ್ದಾರೆ. ಕಾರ್ಯಾಚರಣೆ ಮುಂದುವರಿದಿದೆ.

ರಾಮದುರ್ಗ ತಾಲ್ಲೂಕಿನ ಹಂಪಿಹೊಳಿ ಮತ್ತು ಬಾಗಲಕೋಟೆಯ ಮುಧೋಳ ತಾಲ್ಲೂಕಿನ ರೂಗಿಯಲ್ಲಿ ರಕ್ಷಣಾ ಕಾರ್ಯ ನಡೆಸಿದೆ.

ಆಹಾರ ಪೊಟ್ಟಣ ವಿತರಣೆ:ಪ್ರವಾಹದಿಂದಾಗಿ ಚಿಕ್ಕೋಡಿ ತಾಲ್ಲೂಕಿನ ಕೆಲ ಗ್ರಾಮಗಳು ನಡುಗಡ್ಡೆಯಂತಾಗಿದ್ದು, ಅಂತಹ ಪ್ರದೇಶಗಳಲ್ಲಿ ಹೆಲಿಕಾಪ್ಟರ್ ಮೂಲಕ ಆಹಾರ ಪೊಟ್ಟಣಗಳನ್ನು ವಿತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಸದಲಗಾ, ಇಂಗಳಿ, ಚಂದೂರ ಟೇಕ್, ಯಡೂರವಾಡಿ ಮತ್ತಿತರ ಕಡೆಗಳಲ್ಲಿ ಆಹಾರ ಪೊಟ್ಟಣ ಮತ್ತು ಕುಡಿಯುವ ನೀರಿನ ಬಾಟಲಿಗಳನ್ನು ಸೇನಾ ಹೆಲಿಕಾಪ್ಟರ್ ಮೂಲಕ ಪೂರೈಸಲಾಗುತ್ತಿದೆ.

ಇದಲ್ಲದೇ ಬೆಳಗಾವಿ ನಗರದಲ್ಲಿಯೂ ಪರಿಹಾರ ಕೇಂದ್ರಗಳನ್ನು ಸ್ಥಾಪಿಸಿ, ನಗರ ಪಾಲಿಕೆಯ ವತಿಯಿಂದ ನಿರ್ವಹಿಸಲಾಗುತ್ತಿದೆ.

ಸೇನೆ, ಪೊಲೀಸ್, ಎನ್.ಡಿ.ಆರ್.ಎಫ್., ಎಸ್.ಡಿ.ಆರ್.ಎಫ್, ಗೃರಕ್ಷಕದಳ ಸೇರಿದಂತೆ ಸರ್ಕಾರದ ಎಲ್ಲ ಇಲಾಖೆಯ ಅಧಿಕಾರಿಗಳು ನಿರಂತರವಾಗಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ಜನರು ಆತಂಕಕ್ಕೆ ಒಳಗಾಗದೇ ತುರ್ತು ಸಂದರ್ಭಗಳಲ್ಲಿ ಸಹಾಯವಾಣಿ ಕೇಂದ್ರಗಳು ಅಥವಾ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.