
ಪ
ರಾಯಬಾಗ: ಗ್ರಾಮೀಣ ಪ್ರದೇಶಗಳ ನೀರಿನ ಭದ್ರತೆ ಹೆಚ್ಚಿಸುವ ಉದ್ದೇಶದಿಂದ ರಾಯಬಾಗ ತಾಲ್ಲೂಕಿನಲ್ಲಿ 39 ಕೆರೆಗಳನ್ನು ತುಂಬಿಸುವ ಕಾರ್ಯ ಭರದಿಂದ ಸಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ತಾಲ್ಲೂಕಿನ ಮಾಡಲಗಿ, ಬೂದಿಹಾಳ, ಹುಬ್ಬರವಾಡಿ ಹಾಗೂ ಮೇಖಳಿ ಗ್ರಾಮಗಳ ಕೆರೆ ತುಂಬುವ ಕಾಮಗಾರಿಗಳನ್ನು ವೀಕ್ಷಿಸಿ ಮಾತನಾಡಿದರು.
ರಾಯಬಾಗ ತಾಲ್ಲೂಕಿನಲ್ಲಿ ಕೃಷಿ ಹಾಗೂ ಕುಡಿಯುವ ನೀರಿನ ಅವಶ್ಯಕತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, 39 ಕೆರೆ ತುಂಬುವ ಯೋಜನೆ ಅತ್ಯಂತ ಮಹತ್ವದ್ದಾಗಿದೆ. ಈ ಯೋಜನೆಯಿಂದ ರೈತರಿಗೆ ನೀರಾವರಿ ಸೌಲಭ್ಯ ಒದಗುವುದರ ಜತೆಗೆ ಭೂಗರ್ಭ ಜಲಮಟ್ಟ ವೃದ್ಧಿಯಾಗಲಿದ್ದು, ಪಶುಸಂಗೋಪನೆ ಹಾಗೂ ಗ್ರಾಮೀಣ ಜೀವನಕ್ಕೆ ಸ್ಥಿರತೆ ಸಿಗಲಿದೆ ಎಂದು ಸಚಿವರು ಹೇಳಿದರು.
ಕೆರೆ ತುಂಬುವ ಕಾಮಗಾರಿಯಲ್ಲಿ ಗುಣಮಟ್ಟ ಹಾಗೂ ತಾಂತ್ರಿಕ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನೀರು ನಷ್ಟವಾಗುವ ಸಾಧ್ಯತೆ ಇರುವೆಡೆಗಳಲ್ಲಿ ತಕ್ಷಣ ತಿದ್ದುಪಡಿ ಕ್ರಮ ಕೈಗೊಳ್ಳಬೇಕು. ಯಾವುದೇ ನಿರ್ಲಕ್ಷ್ಯ ಅಥವಾ ವಿಳಂಬವನ್ನು ಸರ್ಕಾರ ಸಹಿಸುವುದಿಲ್ಲ ಎಂದು ಅವರು ಎಚ್ಚರಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ, ಡಿ ಎಸ್ ನಾಯಿಕ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅಪ್ಪಾಸಾಬ ಕುಲಗುಡೆ, ಜ್ಯೋತಿ ಕೆಂಪಟ್ಟಿ, ಅರ್ಜುನ ನಾಯಿಕವಾಡಿ, ದಿಲೀಪ ಜಮಾದಾರ,ಅಮಿತ ಘಾಟಗೆ,ಶಿವಾನಂದ ಮರಾಯಿ, ಹಾಜಿ ಮುಲ್ಲಾ, ಜಿನೇಂದ್ರ ಖೇಮಲಾಪೂರೆ, ವಸಂತ ಕರಿಗಾರ, ವಿನಾಯಕ ಕುಂಬಾರ,ಮಾರುತಿ ( ಪಿಂಟು) ಕರಿಗಾರ, ಅಶೋಕ ನಾಯಿಕ,ನಾಮದೇವ ಕಾಂಬಳೆ, ದಿಲೀಪ ಪಾಯನ್ನವರ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.