
ಬೆಳಗಾವಿಯ ಅಶೋಕ ವೃತ್ತದಲ್ಲಿ ಬುಧವಾರ ಬೆಳಿಗ್ಗೆ ಸ್ವಚ್ಛತಾ ಓಟಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ಕೊಟ್ಟರು
ಪ್ರಜಾವಾಣಿ ಚಿತ್ರ
ಬೆಳಗಾವಿ: ನಗರಾಭಿವೃದ್ಧಿ ಇಲಾಖೆ ಮತ್ತು ಪೌರಾಡಳಿತ ನಿರ್ದೇಶನಾಲಯದ ವತಿಯಿಂದ ಇಲ್ಲಿ ಬುಧವಾರ ಮುಂಜಾವಿನಲ್ಲಿ ಆಯೋಜಿಸಿದ್ದ ‘ಸ್ವಚ್ಛತಾ ಓಟ’ಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ಕೊಟ್ಟರು.
ನಂತರ ಮಾತನಾಡಿ, 'ಇಲ್ಲಿನ ಕೆರೆ, ಗಿಡಮರಗಳು ಮತ್ತು ಪರಿಸರ ನೋಡಿದಾಗ, ಬೆಂಗಳೂರು ಮಹಾನಗರಕ್ಕಿಂತ ಬೆಳಗಾವಿಯೇ ಸುಂದರವಾಗಿದೆ ಎಂದೆನಿಸುತ್ತದೆ. ಇಲ್ಲಿ ಸ್ವಚ್ಛತೆ ಕಾಪಾಡಲು ಸರ್ಕಾರ ವಿವಿಧ ಯೋಜನೆಗಳಡಿ ಸಾಕಷ್ಟು ಅನುದಾನ ಕೊಟಗಟಿದೆ. ಸ್ವಚ್ಛತೆ ಕಾಪಾಡುವ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ' ಎಂದು ಹೇಳಿದರು.
'ಇದು ರಾಜ್ಯದ ಎರಡನೇ ರಾಜಧಾನಿ. ಮುಂದೆ ಇದಕ್ಕೆ ದೊಡ್ಡ ಭವಿಷ್ಯವಿದೆ. ಎಲ್ಲರೂ ಸೇರಿಕೊಂಡು ಬೆಳಗಾವಿಯನ್ನು ಸ್ವಚ್ಛ ನಗರವಾಗಿಸೋಣ' ಎಂದು ಕರೆಕೊಟ್ಟರು.
ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ, 'ಸ್ವಚ್ಛತೆಯೇ ದೇವರು ಎಂದು ಮಹಾತ್ಮ ಗಾಂಧೀಜಿ ಹೇಳಿದ್ದರು. ಇಡೀ ನಗರ ಸ್ವಚ್ಛವಾಗಿ ಇರಬೇಕು ಎಂದರೆ ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ' ಎಂದು ಅಭಿಪ್ರಾಯಪಟ್ಟರು.
'ನಮ್ಮ ಮನೆಯನ್ನು ಸ್ವಚ್ಛವಾಗಿ ಇರಿಸಿಕೊಳ್ಳುವಂತೆ ರಸ್ತೆಗಳಲ್ಲೂ ಸ್ವಚ್ಛತೆ ಕಾಪಾಡಬೇಕು. ಎಲ್ಲೆಂದರಲ್ಲಿ ಕಸ ಎಸೆಯಬಾರದು' ಎಂದು ಕರೆಕೊಟ್ಟರು.
'ಸ್ವಚ್ಛತೆ ವಿಚಾರದಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಅಗ್ರಸ್ಥಾನಕ್ಕೆ ಬರಬೇಕು. ಪ್ರತಿಯೊಬ್ಬರೂ ಸ್ವಚ್ಛತೆ ಸಂಕಲ್ಪ ಮಾಡಬೇಕು' ಎಂದು ಕೋರಿದರು.
ಅಶೋಕ ವೃತ್ತದಿಂದ ಆರಂಭವಾದ ಓಟ ಸಂಗೊಳ್ಳಿ ರಾಯಣ್ಣ ವೃತ್ತ, ಶ್ರೀಕೃಷ್ಣದೇವರಾಯ ವೃತ್ತ ಮತ್ತಿತರ ಮಾರ್ಗಗಳಲ್ಲಿ ಸಾಗಿ, ಕೋಟೆ ಕೆರೆ ಆವರಣ ತಲುಪಲಿದೆ.
ಮೈಕೊರೆಯುವ ಚಳಿ ಮಧ್ಯೆಯೂ ವಿವಿಧ ವಯೋಮಾನದವರು ಉತ್ಸಾಹದಿಂದ ಪಾಲ್ಗೊಂಡು ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಸ್ವತಃ ಜನಪ್ರತಿನಿಧಿಗಳು, ಅಧಿಕಾರಿಗಳು ಹೆಜ್ಜೆ ಹಾಕುತ್ತಿದ್ದಾರೆ.
ಸಚಿವ ರಹೀಂ ಖಾನ್,ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಆಸಿಫ್ ಸೇಠ್, ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.