ಬೆಳಗಾವಿ: ‘ಅಭಿವೃದ್ಧಿ ಕಾಮಗಾರಿ ಮಾಡದೇ, ಚುನಾವಣೆ ಕಾಲಕ್ಕೆ ಮಾತ್ರ ಬಂದಿದ್ದೀರಿ’ ಎಂದು ಮಹಿಳೆಯೊಬ್ಬರು ಶಾಸಕ ಅನಿಲ ಬೆನಕೆ ಅವರನ್ನು ತರಾಟೆ ತೆಗೆದುಕೊಂಡ ವಿಡಿಯೊ ತುಣುಕು ಸಾಮಾಜಿಕ ಕಾಲತಾಣಗಳಲ್ಲಿ ಹರಿದಾಡುತ್ತಿದೆ.
ಇಲ್ಲಿನ ಮಾಳಮಾರುತಿ ಬಡಾವಣೆಯಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲು ಶಾಸಕ ಹಾಗೂ ಅವರ ಬೆಂಬಲಿಗರು ಶನಿವಾರ ಬಂದಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಕೆಲ ಮಹಿಳೆಯರು ತಕರಾರು ತೆಗೆದರು. ಈ ಪ್ರದೇಶದಲ್ಲಿ ಬೀದಿದೀಪ ಇಲ್ಲ, ಇಷ್ಟು ವರ್ಷಗಳ ನಂತರ ನಮ್ಮ ಗೋಳು ಗಮನಕ್ಕೆ ಬಂದಿತೇ ಎಂದು ಕೇಳಿದರು.
ಇದಕ್ಕೆ ಶಾಸಕರು ಸರಿಯಾಗಿ ಪ್ರತಿಕ್ರಿಯೆ ನೀಡಿದ ಕಾರಣ ಕೋಪಗೊಂಡ ಮಹಿಳೆಯೊಬ್ಬರು, ‘ಶಾಸಕ, ಸಂಸದರು ಆದರೇನಾಯಿತು, ಮೊದಲು ಸರಿಯಾಗಿ ಮಾತನಾಡುವುದನ್ನು ಕಲಿಯಬೇಕು. ಅಭಿವೃದ್ಧಿ ಬಗ್ಗೆ ನಾವು ಪ್ರಶ್ನೆ ಕೇಳುತ್ತೇವೆ ನೀವು ಉತ್ತರ ಹೇಳಲೇಬೇಕು’ ಎಂದು ಏರುದನಿಯಲ್ಲಿ ತರಾಟೆ ತೆಗೆದುಕೊಂಡರು.
‘ನೀವು ಉದ್ದೇಶಪೂರ್ವಕವಾಗಿ ಆರೋಪ ಮಾಡಲು ಸಿದ್ಧವಾಗಿ ಬಂದಿದ್ದೀರಿ’ ಎಂದು ಶಾಸಕ ಅನಿಲ ಬೆನಕೆ ಹೇಳಿದಾಗ, ಮಹಿಳೆಯರಿಂದ ಮತ್ತಷ್ಟು ಆಕ್ರೋಶ ವ್ಯಕ್ತವಾಯಿತು. ಸುತ್ತ ಸೇರಿದ ಮುಖಂಡರು ಅವರನ್ನು ಸಮಾಧಾನ ಪಡಿಸಿದರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.