ADVERTISEMENT

ಬೆಮುಲ್: ವಿವೇಕರಾವ ಪುನರಾಯ್ಕೆ, ಜಾರಕಿಹೊಳಿ ಕುಟುಂಬದ ಹಿಡಿತ ಮತ್ತೊಮ್ಮೆ ಸಾಬೀತು

​ಪ್ರಜಾವಾಣಿ ವಾರ್ತೆ
Published 10 ಮೇ 2019, 12:44 IST
Last Updated 10 ಮೇ 2019, 12:44 IST
ಬೆಳಗಾವಿಯ ಬೆಮುಲ್ ಅಧ್ಯಕ್ಷರಾಗಿ ಆಯ್ಕೆಯಾದ ವಿವೇಕರಾವ ಪಾಟೀಲ ಅವರನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿನಂದಿಸಿದರು
ಬೆಳಗಾವಿಯ ಬೆಮುಲ್ ಅಧ್ಯಕ್ಷರಾಗಿ ಆಯ್ಕೆಯಾದ ವಿವೇಕರಾವ ಪಾಟೀಲ ಅವರನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿನಂದಿಸಿದರು   

ಬೆಳಗಾವಿ: ತೀವ್ರ ಕುತೂಹಲ ಮೂಡಿಸಿದ್ದ ಇಲ್ಲಿನ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಬೆಮುಲ್) ಅಧ್ಯಕ್ಷರ ಚುನಾವಣೆಯಲ್ಲಿ, ವಿಧಾನಪರಿಷತ್ ಸದಸ್ಯ ವಿವೇಕರಾವ ಪಾಟೀಲ ಪುನರಾಯ್ಕೆಯಾದರು.

ಶುಕ್ರವಾರ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಒಟ್ಟು 14 ನಿರ್ದೇಶಕರನ್ನು ಹೊಂದಿರುವ ಒಕ್ಕೂಟದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬೇರಾವ ನಿರ್ದೇಶಕರೂ ನಾಮಪತ್ರ ಸಲ್ಲಿಸಲಿಲ್ಲ. 14 ನಿರ್ದೇಶಕರೊಂದಿಗೆ, ಸರ್ಕಾರಿದಂದ ನಾಮನಿರ್ದೇಶ ಮಾಡಿದ ಐವರು ನಿರ್ದೇಶಕರು ಮತದಾನದ ಹಕ್ಕು ಹೊಂದಿದ್ದರು.

ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಿತು. ಜಯಶ್ರೀ ಶಿಂತ್ರಿಚುನಾವಣಾ ಅಧಿಕಾರಿಯಾಗಿದ್ದರು.

ADVERTISEMENT

ಜಿಲ್ಲೆಯ ರಾಜಕಾರಣದ ಮೇಲೆ ಬಲವಾದ ಹಿಡಿತ ಸಾಧಿಸಿರುವ ಜಾರಕಿಹೊಳಿ ಸಹೋದರರು ಒಕ್ಕೂಟದಲ್ಲೂ ನಮ್ಮ ಪ್ರಾಬಲ್ಯವಿದೆ ಎಂದು ಸಾಬೀತು‍ಪಡಿಸಿದರು. ಏಕೆಂದರೆ, ವಿವೇಕರಾವ ಶಾಸಕ ರಮೇಶ ಜಾರಕಿಹೊಳಿ ಬೆಂಬಲಿಗ. ಅವರ ಆಯ್ಕೆಗೆ ಶಾಸಕ ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ ಕೂಡ ಬೆಂಬಲ ನೀಡಿದ್ದಾರೆ. ಜಾರಕಿಹೊಳಿ ಸಹೋದರರು ಅಖಾಡಕ್ಕೆ ಇಳಿದಿದ್ದರಿಂದ ಬೇರಾವ ನಾಯಕರೂ ಕಣಕ್ಕಿಳಿಯಲಿಲ್ಲ. ಇತರ ನಿರ್ದೇಶಕರು ಕೂಡ ಚುನಾವಣೆಯಲ್ಲಿ ಸ್ಪರ್ಧಿಸಲಿಲ್ಲ.

ಬೆಳಿಗ್ಗೆ ನಿರ್ದೇಶಕರ ಸಭೆ ನಡೆಸಿದ ಬಾಲಚಂದ್ರ ಅವಿರೋಧ ಆಯ್ಕೆ ಮಾಡಿಸುವಲ್ಲಿ ಯಶಸ್ವಿಯಾದರು.

ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ 7 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ಅದರಲ್ಲಿ ವಿವೇಕರಾವ, ರಮೇಶ ಜಾರಕಿಹೊಳಿ ಪುತ್ರ ಅಮರನಾಥ ಕೂಡ ಸೇರಿದ್ದರು. ಜಾರಕಿಹೊಳಿ ಸಹೋದರರು ಅಮರನಾಥಗೆ ಅವಕಾಶ ಮಾಡಿಕೊಡಬಹುದು ಎಂದು ಚರ್ಚೆಯಾಗಿತ್ತು. ಆದರೆ, ಅವರು ತಮ್ಮ ಬೆಂಬಲಿಗನಿಗೆ ಮತ್ತೊಮ್ಮೆ ಮಣೆ ಹಾಕಿದ್ದಾರೆ.

ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಈ ಚುನಾವಣಾ ಅಖಾಡದಲ್ಲಿ ಕಾಣಿಸಿಕೊಳ್ಳದಿರುವುದು ಅಚ್ಚರಿ ಮೂಡಿಸಿತು.

2ನೇ ಬಾರಿಗೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ವಿವೇಕರಾವ ಅವರನ್ನು ಶಾಸಕ ಬಾಲಚಂದ್ರ ಜಾರಕಿಹೊಳಿಮ ಮುಖಂಡ ಅರವಿಂದ ಪಾಟೀಲ, ನಿರ್ದೇಶಕ ಅಮರನಾಥ ಅಭಿನಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.