ಬೈಲಹೊಂಗಲ: ಪಟ್ಟಣದ ವಿಜಯ ಮೆಡಿಕಲ್ ಮಾಲೀಕ ಅನಿಲಕುಮಾರ ಇಂಚಲ ಅವರಿಗೆ ಬೆಂಗಳೂರಿನಲ್ಲಿ ನಡೆದ ವಿಶ್ವ ಫಾರ್ಮಸಿಸ್ಟರ ದಿನಾಚರಣೆ 2025ರ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯಿಂದ ರಾಜ್ಯ ಮಟ್ಟದ ಬೆಸ್ಟ್ ಫಾರ್ಮಾಸಿಸ್ಟ್ ಅವಾರ್ಡ್ ಅನ್ನು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಪ್ರದಾನ ಮಾಡಿದರು.
ಔಷಧ ಕ್ಷೇತ್ರದಲ್ಲಿ ಅನಿಲಕುಮಾರ ಇಂಚಲ ಅವರು ನೀಡಿದ ಸಮರ್ಪಿತ ಸೇವೆ, ಆರೋಗ್ಯಕರ ಸಮಾಜಕ್ಕಾಗಿ ತೋರಿದ ಕಾಳಜಿ, ಒತ್ತು, ಬದ್ಧತೆ ಶ್ಲಾಘನೀಯವಾಗಿದೆ ಎಂದರು.
ಅನಿಲಕುಮಾರ ಇಂಚಲ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ‘ವಿಜಯ ಮೆಡಿಕಲ್ ಸ್ವಾತಂತ್ರ್ಯದ ಪೂರ್ವ 1943ನೇ ಇಸ್ವಿಯಲ್ಲಿ ಪ್ರಾರಂಭವಾಗಿದೆ. ತಂದೆ ನ್ಯಾಯವಾದಿ ದಿ.ಎ.ಕೆ.ಇಂಚಲ ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ 83 ವರ್ಷಗಳಿಂದ ಗ್ರಾಹಕರಿಗೆ ಉಪಯುಕ್ತ ಸೇವೆ ಒದಗಿಸಿಕೊಂಡು ಬಂದಿದ್ದೇವೆ. ರೋಗಿಗಳಿಗೆ ತ್ವರಿತಗತಿಯಲ್ಲಿ ಔಷಧೋಪಚಾರ ಮಾಡಿ ನೆರವಾಗಿದ್ದೇವೆ’ ಎಂದರು.
ಕರ್ನಾಟಕ ರಾಜ್ಯ ಔಷಧ ವಿಜ್ಞಾನ ಪರಿಸತ್ತಿನ ಡಾ.ಸಿರ್ಸೆ ಕ್ರಾಂತಿಕುಮಾರ, ಬೆಂಗಳೂರು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತ ಶ್ರೀನಿವಾಸ ಕೆ., ಯುವ ಮುಖಂಡ ಗೌತಮ ಇಂಚಲ, ಆರೋಗ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.